
ಪ್ರಗತಿವಾಹಿನಿ ಸುದ್ದಿ: ಕಾಡಾನೆಯೊಂದು ಕಾರಿನ ಮೇಲೆ ದಾಳಿ ಮಾಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರಿನ ದೋಲನಮನೆ ಗ್ರಾಮದಲ್ಲಿ ನಡೆದಿದೆ.
ಮಹಮ್ಮದ್ ಜಾಹಿದ್ ಎಂಬವರು ಬೆಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಕುಟುಂಬದೊಂದಿಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದೆ. ಕಾರಿನ ಹಿಂಭಾಗ ಕಾಡಾನೆ ದಾಳಿಯಿಂದ ಜಖಂ ಆಗಿದೆ. ಈ ವೇಳೆ ಕಾರಿನಲ್ಲಿದ್ದ ಮಹಮ್ಮದ್ ಜಾಹಿದ್ ತಾಯಿ, ಅಕ್ಕ ಅವರ ಮಕ್ಕಳು ಕಿರುಚಾಡಿದ್ದಾರೆ. ಆದರೂ ಸ್ಥಳದಿಂದ ಕದಲದ ಕಾಡಾನೆ, ಕಾರಿನ ಬಳಿಯೇ ಕೆಲಕಾಲ ನಿಂತಿದೆ.
ಜಾಹಿದ್ ಕೂಡಲೇ ಪಾರ್ಕಿಂಗ್ ಲೈಟ್ ಆನ್ ಮಾಡಿದ್ದಾರೆ. ಬೆಳಕನ್ನು ಕಂಡು ಕಾಡಾನೆ ಕಾರಿನಿಂದ ಸ್ವಲ್ಪ ದೂರ ಹೋಗಿ ನಿಂತಿದೆ. ನಂತರ ಆನೆ ಕಾರ್ಯಪಡೆಗೆ (ಇಟಿಎಫ್) ಮಾಹಿತಿ ನೀಡಿದ್ದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಇಟಿಎಫ್ ಸಿಬ್ಬಂದಿ, ಪಟಾಕಿ ಸಿಡಿಸಿ ಕಾಡಾನೆಯನ್ನು ಅರಣ್ಯಕ್ಕೆ ಕಳಿಸಿದ್ದಾರೆ.



