
ಪ್ರಗತಿವಾಹಿನಿ ಸುದ್ದಿ: ಸಚಿವ ಸಂಪುಟ ವಿಸ್ತರಣೆ ವೇಳೆ ತನಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಶವಂತರಾಯಗೌಡ ಪಾಟೀಲ್ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ.
ಇಂಡಿ ಶಾಸಕರಾಗಿದ್ದ ಯಶವಂತರಾಯಗೌಡ ಪಾಟೀಲ್, ತನಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಳ ಬೇಸರ ವ್ಯಕ್ತಪಡಿಸಿದ್ದರು. ಐದು ಬಾರಿ ಶಾಸಕನಾಗಿ ಆಯ್ಕೆಯಾದರೂ ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸದೇ ಅಗೌರವ ತೋರಲಾಗಿದೆ. ನಿಷ್ಠಾವಂತರು, ಪ್ರಾಮಾಣಿಕರಿಗೆ ಕಾಲವಲ್ಲ. ಈ ರಾಜಕಾರಣವೇ ಬೇಡ ಎಂದು ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದರ ಬೆನ್ನಲ್ಲೇ ಹೈಕಮಾಂಡ್ ನಾಯಕರು ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ನಿರಂತರ ಮನವೊಲಿಕೆ ಮಾಡಿ ರಾಜೀನಾಮೆ ಹಿಂಪಡೆಯುವಂತೆ ಸೂಚಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ರಾಜೀನಾಮೆ ಹಿಂಪಡೆಯಲು ಯಶವಂತರಾಯಗೌಡ ಪಾಟೀಲ್ ಒಪ್ಪಿದ್ದು, ಸ್ಪೀಕರ್ ಗೆ ಪತ್ರ ಬರೆದು ತಮ್ಮ ರಾಜೀನಾಮೆ ಅಂಗೀಕರಿಸದಂತೆ ತಿಳಿಸಿದ್ದಾರೆ.



