
ಪ್ರಗತಿವಾಹಿನಿ ಸುದ್ದಿ: “ನಮ್ಮಲ್ಲಿರುವ ಪ್ರತಿಭಾವಂತ ಮಾನವ ಸಂಪನ್ಮೂಲ, ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಕಲಿಯಬೇಕು. ಅವರು ಕೇವಲ ಉದ್ಯೋಗಿಗಳಾಗುವುದಲ್ಲ, ಉದ್ಯೋಗದಾತರಾಗಬೇಕು ಎಂಬುದು ನಮ್ಮ ಬಯಕೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ “ವಿದೇಶದಲ್ಲಿ ಅಧ್ಯಯನ 2026” ಕಾರ್ಯಕ್ರಮಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.
“ದೇಶದ ಅಧ್ಯಯನಕ್ಕೆ ನಮ್ಮ ಸರ್ಕಾರ ಹೊಸ ಬಾಗಿಲು ತೆರೆದಿದೆ. ಶರಣ ಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಸಾಗರತ್ತರ ಜ್ಞಾನ ಬೆಸೆಯುವಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಜ್ಞಾನದ ಮೇಲಿನ ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯುತ್ತಮ ಆಸ್ತಿಯಾಗುತ್ತದೆ. ಮಾನವನಿಗೆ ಎಲ್ಲೆಗಳಿವೆ, ಆದರೆ ಜ್ಞಾನಕ್ಕೆ ಎಲ್ಲೆಗಲಿಲ್ಲ. ಜಾಗತಿಕ ಮಟ್ಟದ ಶಿಕ್ಷಣದ ಅವಕಾಶ ಪಡೆಯುವುದರಿಂದ ಮಾನಸಿಕವಾಗಿ ಬಲಿಷ್ಠರನ್ನಾಗಿಸುತ್ತದೆ” ಎಂದು ತಿಳಿಸಿದರು.
“ರುಪರಪ ಹರಿಸದ, ದಾಯಾದಿ ಧಕ್ಕಿಸದ, ಬೆಂಕಿಯಲ್ಲಿ ಸುಡದ, ನೀರಿನಲ್ಲಿ ನೆನೆಯದ, ಗುಪ್ತ ನಿಧಿ ವಿದ್ಯೆ ಎಂದು ನಮ್ಮ ಗುರುಗಳು ನಮಗೆ ಕಳಿಸಿದ್ದರು. ನಾವು ಕಲಿತ ವಿದ್ಯೆಯನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಸಚಿವರು ಹಾಗೂ ಸರ್ಕಾರ ನಿಮಗೆ ಜಾಗತಿಕ ಮಟ್ಟದಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ ನಿಮ್ಮ ಭವಿಷ್ಯವನ್ನು ಉಜ್ವಲಿಸುವಂತೆ ಮಾಡುತ್ತಿದೆ” ಎಂದರು.
“ಬೆಂಗಳೂರು ಜಾಗತಿಕ ನಗರ. ಇಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಕೆಲಸ ಮಾಡುತ್ತಿದ್ದು, ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯದಲ್ಲಿ 16 ಲಕ್ಷ ಐಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಇಂಜಿನಿಯರ್ ಗಳನ್ನು, 13,940 ವೈದ್ಯರನ್ನು ಉತ್ಪಾದನೆ ಮಾಡುತ್ತಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ಮಾನವ ಸಂಪನ್ಮೂಲವನ್ನು ಬೇರೆ ಎಲ್ಲೂ ತಯಾರಿಸುತ್ತಿಲ್ಲ” ಎಂದು ವಿವರಿಸಿದರು.

“ಮಹಾತ್ಮ ಗಾಂಧಿ, ಅಂಬೇಡ್ಕರ್, ರಾಜಾರಾಮ್ ಮೋಹನ್ ರಾಯ್ ರಂತಹ ನಾಯಕರು ವಿದೇಶದಲ್ಲಿ ಓದಿ, ನಮ್ಮ ದೇಶವನ್ನು ಮುನ್ನಡೆಸಿದ್ದಾರೆ. ವಿದೇಶದ ವಿವಿಗಳಲ್ಲಿ ನಮ್ಮ ಮಕ್ಕಳಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಲು ಕರ್ನಾಟಕ ಸರ್ಕಾರ ಈ ಅವಕಾಶ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿವಿಗಳು ಭಾಗವಹಿಸಿದ್ದು, 300ಕ್ಕೂ ಹೆಚ್ಚು ವಿಷಯಗಳಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳಿಂದ ವಿಶೇಷ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿವಿಧ ಬ್ಯಾಂಕ್ ಗಳು ನೆರವು ನೀಡುತ್ತಿದ್ದು, 2 ಕೋಟಿ ರೂ. ವರೆಗೂ ಸಾಲ ಸೌಲಭ್ಯ ನೀಡುತ್ತಿವೆ. ರಾಜ್ಯದ ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಂಡು ಬಲಿಷ್ಠವಾಗಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
“ನಾವು ಕ್ವೀನ್ಸ್ ಲ್ಯಾಂಡ್ ವಿವಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದೇಶದ ವಿವಿಗಳಲ್ಲಿ ವ್ಯಾಸಂಗ ಮಾಡಲು 3,145 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಮಕ್ಕಳು ವಿದ್ಯಾಭ್ಯಾಸ ಮುಗಿಸಿದ್ದರೂ ಅವರು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿಗೆ ಬನ್ನಿ ಎಂದು ಕರೆದಿರುವೆ” ಎಂದರು.
“ನಿಮ್ಮ ಭವಿಷ್ಯ ರಾಜ್ಯದ ಭವಿಷ್ಯ, ನಿಮ್ಮ ಶಕ್ತಿ ದೇಶದ ಶಕ್ತಿ. ವಿದ್ಯಾರ್ಥಿಗಳು ನಮ್ಮ ಆಸ್ತಿಗಳು. ಇಡೀ ವಿಶ್ವ ನಮ್ಮನ್ನು ಗಮನಿಸುತ್ತಿದೆ. ಭಾರತವನ್ನು ಬೆಂಗಳೂರು, ಕರ್ನಾಟಕದ ಮೂಲಕ ನೋಡಲಾಗುತ್ತಿದೆ. ನಮ್ಮ ವಿದ್ಯಾರ್ಥಿಗಳ ಚುರುಕುತನವನ್ನು ವಿಶ್ವದ ಉದ್ಯಮಗಳ ನಾಯಕರು ಗಮನಿಸುತ್ತಿದ್ದಾರೆ. ನಮ್ಮಲ್ಲಿನ ಸಂಸ್ಕೃತಿ, ಇತಿಹಾಸ, ಬಾಂಧವ್ಯದ ಮೂಲಕ ನಮ್ಮ ಮಕ್ಕಳು ಉತ್ತಮ ಪ್ರಜೆಗಳಾಗುತ್ತಿದ್ದಾರೆ. ನೀವು ನಿಮ್ಮ ಮೂಲ ಮರೆಯಬಾರದು, ಮರೆತರೆ ಯಶಸ್ಸು ಸಿಗುವುದಿಲ್ಲ. ಹೀಗಾಗಿ ನೀವು ನಿಮ್ಮ ಪೋಷಕರು, ಶಿಕ್ಷಕರನ್ನು ಮರೆಯಬಾರದು” ಎಂದು ಹೇಳಿದರು.
“ನಮ್ಮ ಸರ್ಕಾರ ಶಿಕ್ಷಕರಿಗೆ ಗೌರವ ನೀಡಲು Tr. (Teacher) ಎಂದು ತಮ್ಮ ಹೆಸರಿನ ಮುಂದೆ ಸೇರಿಸಲು ತೀರ್ಮಾನಿಸಿದ್ದೇವೆ. ನನಗೆ ನೂರಾರು ಕರೆ ಬಂದಿದ್ದು, ನಮ್ಮ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ನಾವು ಗುರುಗಳನ್ನು ದೇವರಂತೆ ಕಾಣುತ್ತೇವೆ. ಶಿಕ್ಷಕರಿಗೆ ಗೌರವ ನೀಡಲು ಮುಂದಾಗಿದ್ದೇವೆ. ನಿಮ್ಮಲ್ಲಿ ಅವರ ಯಶಸ್ಸು ಕಾಣಲು ತಂದೆ ತಾಯಿ ಹಾಗೂ ಗುರುಗಳು ಬಯಸುತ್ತಾರೆ” ಎಂದರು.
“ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಭಾರದಲ್ಲಿ 140 ಅಂತಾರಾಷ್ಟ್ರೀಯ ಶಾಲೆಗಳಿದ್ದು, ಬೆಂಗಳೂರಿನಲ್ಲಿ 38 ಅಂತಾರಾಷ್ಟ್ರೀಯ ಶಾಲೆಗಳಿವೆ. ಇದು ಕರ್ನಾಟಕದ ಶಕ್ತಿ. ಕರ್ನಾಟಕ ದೇಶದ ಜ್ಞಾನದ ಕೇಂದ್ರವಾಗಿದೆ. ನಿಮ್ಮೆಲ್ಲರಿಗೂ ಯಶಸ್ಸು ಸಿಗಲಿ” ಎಂದು ಶುಭ ಕೋರಿದರು.




