
ಪ್ರಗತಿವಾಹಿನಿ ಸುದ್ದಿ: ಮಹಿಳೆಯನ್ನು ಕೂಡಿಹಾಕಿ ಕಿರುಕುಳ, ಹಿಂಸೆ ನೀಡಿದ ಆರೋಪ ಸಂಬಂಧ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
2022 ಹಾಗೂ 2023 ರಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯು ಬುಧವಾರ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಶಾಸಕ ಮುನಿರತ್ನ, ಆರ್.ಆರ್. ನಗರ ಠಾಣೆ ಇನ್ಸ್ಪೆಕ್ಟರ್ಗಳಾಗಿದ್ದ ಅಯ್ಯಣ್ಣರೆಡ್ಡಿ, ಬಿ.ಎನ್. ಲೋಹಿತ್, ಪಿಎಸ್ಐ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಾಸಕರ ಬೆಂಬಲಿಗರಾದ ಕಿರಣ್ನಾಯ್ಡು, ಲೋಹಿತ್ಗೌಡ ಹಾಗೂ ಇತರರು ಸಹ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕ ಮುನಿರತ್ನ ಹಾಗೂ ಪೊಲೀಸ್ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಒಳಸಂಚು ರೂಪಿಸಿ ಸುಳ್ಳು ಪ್ರಕರಣ ದಾಖಲಿಸಿ ಅಕ್ರಮ ಬಂಧನದಲ್ಲಿಟ್ಟು ಮಹಿಳೆಗೆ ಕಿರುಕುಳ ನೀಡಿದ್ದರು. ಅಪಹರಣ ಮಾಡಿ ಸುಲಿಗೆ ಮಾಡಿ ದೌರ್ಜನ್ಯ ಎಸಗಿದ್ದರು.ಈ ಬಗ್ಗೆ ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ, ಆರೋಪಿಗಳ ವಿರುದ್ಧ ದರೋಡೆ, ಒಳಸಂಚು ಸೇರಿದಂತೆ ಇತರ ಆರೋಪಗಳ ಅನ್ವಯ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ


