
ಪಾಕಿಸ್ತಾನ ಹೈಕಮಿಷನ್ ಗೆ ಸಮನ್ಸ್ ಜಾರಿ ಮಡಿದ ಭಾರತ
ಪ್ರಗತಿವಾಹಿನಿ ಸುದ್ದಿ: ಅಂತಾರಾಷ್ಟ್ರೀಯ ಸಮುದ್ರ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನೌಕಾಪಡೆಯ ಯುದ್ಧನೌಕೆಯೊಂದು ಭಾರತೀಯ ನೌಕೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಉತ್ತರ ಅರಬ್ಬಿ ಸಮುದ್ರದ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಭಾರತೀಯ ಯುದ್ಧನೌಕೆ ವಾಡಿಕೆಯಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ಅತಿವೇಗವಾಗಿ ಬಂದ ಪಾಕಿಸ್ತಾನಿ ನೌಕಾಪಡೆಯ ಹಡಗು, ಏಕಾಏಕಿ ನುಗ್ಗಿ ಡಿಕ್ಕಿ ಹೊಡೆದಿದೆ. ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಘಟನೆಯಲ್ಲಿ ಎರಡೂ ದೇಶಗಳ ನೌಕೆಗಳಿಗಾಗಲಿ ಅಥವಾ ಸಿಬ್ಬಂದಿಗಾಗಲಿ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
ಸಮುದ್ರದಲ್ಲಿ ನೌಕೆಗಳ ಚಲನವಲನ ಮತ್ತು ಪರಸ್ಪರ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಏಪ್ರಿಲ್ 1991 ರಲ್ಲಿ ಮಾಡಿಕೊಳ್ಳಲಾದ ಐತಿಹಾಸಿಕ ಒಪ್ಪಂದದ 10ನೇ ವಿಧಿಯನ್ನು ಪಾಕಿಸ್ತಾನ ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಸಿದೆ.
ಈ ‘ಆಕ್ಷೇಪಾರ್ಹ ಹಾಗೂ ಜವಾಬ್ದಾರಿರಹಿತ’ ನಡೆಗೆ ಪ್ರತಿಯಾಗಿ ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನ್ನ ಚಾರ್ಜ್ ಡಿ ಅಫೇರ್ಸ್ ಸಾಹದ್ ಅಹ್ಮದ್ ವರ್ರೈಚ್ ಅವರಿಗೆ ಕೇಂದ್ರ ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿಗೊಳಿಸಿ ಕಠಿಣ ಪ್ರತಿಭಟನೆ ವ್ಯಕ್ತಪಡಿಸಿದೆ.
ಇಸ್ಲಾಮಾಬಾದ್ನಲ್ಲಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯಕ್ಕೂ ಭಾರತದ ಹೈಕಮಿಷನ್ ಕಚೇರಿ ಮೂಲಕ ಇದೇ ರೀತಿಯ ಕಠಿಣ ಪ್ರತಿಭಟನೆಯನ್ನು ರವಾನಿಸಲಾಗಿದೆ.

