Belagavi NewsKannada NewsKarnataka NewsLatest

*ಕಿತ್ತೂರ ಉತ್ಸವ ವಿಜೃಂಭಣೆಯ ಆಚರಣೆಗೆ ಸಚಿವ ಸತೀಶ ಜಾರಕಿಹೊಳಿ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಅಕ್ಟೋಬರ 23, 24 ಹಾಗೂ 25 ರಂದು ಜರುಗಲಿರುವ 2026ರ ಕಿತ್ತೂರ ಉತ್ಸವದ ವಿಜೃಂಭಣೆಯ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಸೆ.15) ಜರುಗಿದ ಕಿತ್ತೂರ ಉತ್ಸವ-2026 ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Home add -Advt

ಉತ್ಸವದ ಉದ್ಘಾಟನೆಗೆ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಜೊತೆಗೆ ದಸರಾ ಮಾದರಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನಿಯರನ್ನು ಗುರುತಿಸಲು ತಿಳಿಸಿದರು.

ಮೂರು ದಿನಗಳ ಕಾಲ ಜರುಗಲಿರುವ ಚನ್ನಮ್ಮನ ಉತ್ಸವದ ಕಾರ್ಯಕ್ರಮದ ಪ್ರಯುಕ್ತ ಕಿತ್ತೂರಿನ ಇತಿಹಾಸ ಹಾಗೂ ಕಿತ್ತೂರು ಸಂಸ್ಥಾನಕ್ಕೆ ಸೇವೆಗೈದ ಮಹನೀಯರ ಕುರಿತು ಗೋಷ್ಠಿಗಳ ಜೊತೆಗೆ ಮಾದ್ಯಮ ಸಂವಾದ ಆಯೋಜಿಸಲು ಹಾಗೂ ವಿಚಾರ ಸಂಕೀರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು.

ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸ್ಥಳೀಯ ಕಲಾವಿದರುಗಳಿಗೆ ಪ್ರಾಶಸ್ತ್ರ ನೀಡಬೇಕು. ಕಲಾವಿದರ ಆಯ್ಕೆಗೆ ಸಮಿತಿ ರಚಿಸಿ ಸಮಿತಿಯಿಂದ ಆಯ್ಕೆಯಾದಂತಹ ಕಲಾವಿದರಿಗೆ ಅವಕಾಶ ನೀಡಲು ತಿಳಿಸಿದರು.

ಕಿತ್ತೂರು ಉತ್ಸವದ ಪ್ರಯುಕ್ತ ಆಯೋಜಿಸಲಾಗುವ ಕ್ರೀಡಾಕೂಟಗಳಲ್ಲಿ ದೇಶಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಈ ಬಾರಿಯ ಉತ್ಸವದಲ್ಲಿ ಜಾನುವಾರು ಜಾತ್ರೆ ಆಯೋಜಿಸಲು ನಿರ್ದೆಶನ ನೀಡಿದ ಅವರು ಸರಕಾರದ ಸವಲತ್ತುಗಳ ಕುರಿತು ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ಸ್ಥಾಪಿಸಲು ಸೂಚಿಸಿದರು.

ಮೂರು ದಿನಗಳ ಕಾಲ ಜರುಗಲಿರುವ ಕಿತ್ತೂರ ಚನ್ನಮ್ಮಳ ವಿಜಯೋತ್ಸವದ ಪ್ರಯುಕ್ತ ವಿಜಯ ಜ್ಯೋತಿಯನ್ನು ಬೆಂಗಳೂರಿನಿಂದ ಉದ್ಘಾಟಿಸಿ ಕಿತ್ತೂರಿಗೆ ಆಗಮಿಸಲು ರೂಪರೇಷೆಗಳನ್ನು ಸಿದ್ಧಪಡಿಸಬೇಕು. ಉತ್ಸವದ ಯಶಸ್ವಿಗಾಗಿ ರಚಿಸಲಾದ ಉಪ ಸಮಿತಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವುದರ ಮೂಲಕ ಕಿತ್ತೂರ ಉತ್ಸವವನ್ನು ಯಶಸ್ವಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾತನಾಡಿ ಈ ಬಾರಿ ಕಿತ್ತೂರು ಉತ್ಸವದ ಅಂಗವಾಗಿ ಸುವರ್ಣ ವಿಧಾನ ಸೌಧದಿಂದ ಕಿತ್ತೂರ ವರೆಗೆ ಹಾಫ್ ಮ್ಯಾರಾಥಾನ್ ಆಯೋಜಿಸಲು ಚಿಂತಿಸಲಾಗುತ್ತಿದೆ ಎಂದರು.

ಉತ್ಸವದ ಪ್ರಯುಕ್ತ ಕಳೆದ ಬಾರಿಯಂತೆ ಈ ಬಾರಿಯು ಕಿತ್ತೂರ ಕೋಟೆಯ ನಾಲ್ಕು ದ್ವಾರಗಳಿಗೆ ಘೋಷ್ಯ ವಾಕ್ಯದೊಂದಿಗೆ ಮಹನೀಯರ ಹೆಸರಿಡಲು ಕ್ರಮ ವಹಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರ ಜೊತೆಗೆ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರ ಆಯ್ಕೆಗೆ ಕ್ರಮ ವಹಿಸಲಾಗುವುದು ಎಂದರು.

ಉತ್ಸವದ ವ್ಯಾಪಕ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಉಪ ವಿಭಾಗಾಧಿಕಾರಿ ಪ್ರವೀಣ ಜೈನ್ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂತೋಷ ಹಾನಗಲ್ ಅವರುಗಳು ಕಿತ್ತೂರು ಉತ್ಸವದ ಕುರಿತು ಪ್ರಾತ್ಯಕ್ಷಿಕತೆ ಮೂಲಕ ವಿವರಣೆ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಬಾಬಸಾಹೇಬ ಪಾಟೀಲ, ಬುಡಾ ಅಧ್ಯಕ್ಷರು ಹಾಗೂ ಶಾಸಕರಾದ ಆಸೀಫ್ (ರಾಜು) ಸೇಶ್, ವಾ.ಕ.ರಾ.ರ. ಸಾರಿಗೆ ನಿಗಮದ ಅಧ್ಯಕ್ಷರಾದ ಸುನೀಲ ಹನುಮನ್ನವರ, ಪೋಲಿಸ್ ಆಯುಕ್ತರಾದ ಪ್ರಕಾಶ ನಿಕ್ಕಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್. ಕೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button