Latest
ಸುಂದರ್ ಲಾಲ್ ಬಹುಗುಣ ಕೋವಿಡ್ ಗೆ ಬಲಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಖ್ಯಾತ ಪರಿಸರ ಹೋರಾಟಗಾರ, ಚಿಪ್ಕೊ ಚಳುವಳಿ ನಾಯಕ ಸುಂದರ್ ಲಾಲ್ ಬಹುಗುಣ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ 94 ವರ್ಷದ ಸುಂದರ್ ಲಾಲ್ ಬಹುಗುಣ ರಿಷಿಕೇಷ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಮರಗಳ ಹನನ, ಅರಣ್ಯ ನಾಶವನ್ನು ತಡೆಯುವ ನಿಟ್ಟಿನಲ್ಲಿ ಸುಂದರ್ ಲಾಲ್ ಬಹುಗುಣ ಚಿಪ್ಕೊ ಚಳುವಳಿ ಅಥವಾ ಅಪ್ಪಿಕೊ ಚಳುವಳಿ ಆರಂಭಿಸಿದ್ದರು. ಅರಣ್ಯನಾಶ, ಬೃಹತ್ ಅಣೆಕಟ್ಟುಗಳು, ಗಣಿಗಾರಿಕೆ ವಿರುದ್ಧ ಧ್ವನಿಯೆತ್ತಿದ್ದ ಅವರು ಪರಿಸರ ಸಂರಕ್ಷಣೆ ಮಹತ್ವ ಸಾರಿದ್ದರು. 2009ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಸುಂದರ್ ಲಾಲ್ ನ್ಯುಮೋನಿಯಾ ಹಾಗೂ ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.




