Kannada NewsKarnataka NewsLatest

ನಕಲಿ ರಸಗೊಬ್ಬರ ಮಾರಾಟ ಕೇಂದ್ರದ ಮೇಲೆ ದಾಳಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ವೀರಭದ್ರೇಶ್ವರ ಕೃಷಿ ಸೇವಾ ಕೇಂದ್ರ ರಸಗೊಬ್ಬರ ಮಾರಾಟ ಕೇಂದ್ರ ಮತ್ತು ಗೋದಾಮಿನ ಮೇಲೆ ಸೋಮವಾರ (ಅ.೦೯) ದಾಳಿ ನಡೆಸಿ ನಕಲಿ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದ್ದು, ಗೋದಾಮನ್ನು ಜಪ್ತಿ ಮಾಡಲಾಗಿದೆ.

ಕೊಕಟನೂರ ಗ್ರಾಮದ ಕಲ್ಲಯ್ಯ ಮಠಪತಿ ಅವರಿಗೆ ಗೊಬ್ಬರ ಮಾರಾಟ ಕೇಂದ್ರವು ಸೇರಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ನಕಲಿ ರಸಗೊಬ್ಬರ ಮಾರಾಟ ಮಾರುತ್ತಿದ್ದನ್ನು ಪತ್ತೆ ಮಾಡಲಾಗಿದೆ.
ಸದರಿ ಕೇಂದ್ರದಲ್ಲಿ ಫ್ಯಾಕ್ಟ್ ಕಂಪನಿಯ ಅಮೋನಿಯಂ ಸಲ್ಫೇಟ್ ರಸಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಅಧಿಕಾರಿಗಳ ತಂಡವು ಕೂಡಲೇ ದಾಳಿ ನಡೆಸಿ ಮಾರಾಟ ಕೇಂದ್ರದಲ್ಲಿದ್ದ ೧೭೧ ಚೀಲ ನಕಲಿ ಹಾಗೂ ಯಾವುದೇ ಇನ್‌ವೈಸ್ ಇಲ್ಲದೇ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಅಮೋನಿಯಂ ಸಲ್ಫೇಟ್ ರಸಗೊಬ್ಬರವನ್ನು ವಶಕ್ಕೆ ಪಡೆದು ಗೋದಾಮನ್ನು ಸೀಲ್ ಮಾಡಲಾಗಿದೆ.

ಕೇಂದ್ರ ಸರ್ಕಾರ ನಿಗದಿಪಡಿಸಿದಂತೆ ಅಮೋನಿಯಂ ಸಲ್ಫೇಟ್ ರಸಗೊಬ್ಬರಕ್ಕೆ ಗರಿಷ್ಠ ಮಾರಾಟ ದರ ರೂ.೮೫೦ ಪ್ರತಿ ೫೦ ಕೆಜಿ ಚೀಲಕ್ಕೆ ಇದ್ದು, ವಶಪಡಿಸಿಕೊಂಡ ನಕಲಿ ಅಮೋನಿಯಂ ಸಲ್ಫೇಟ್ ರಸಗೊಬ್ಬರ ಕೆಲ ಚೀಲಗಳ ಮೇಲೆ ರೂ. ೮೭೫ ಮತ್ತು ಚೀಲಗಳ ಮೇಲೆ ೧೧೦೦ ಮಾರಾಟ ದರ ನಮೂದಿಸಲಾಗಿದೆ.

ರಸಗೊಬ್ಬರದ ಪರೀಕ್ಷೆಗಾಗಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯ ವರದಿಯನ್ನು ಆಧರಿಸಿ ನಕಲಿ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಕಲ್ಲಯ್ಯ ಮಠಪತಿ ಇವರ ಮೇಲೆ ರಸಗೊಬ್ಬರ ನಿಯಂತ್ರಣ ಆದೇಶದನ್ವಯ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಮುಂದುವರೆದು ಪರವಾನಿಗೆಯ ಷರತ್ತುಗಳನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿದ್ದ ಹಲವಾರು ಬೀಜ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟಕ್ಕೆ ತಡೆ ಆಜ್ಞೆ ನೀಡಲಾಗಿದ್ದು, ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ.

ಜಾಗೃತ ಕೋಶ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರಾದ ಜಿಲಾನಿ ಮೊಖಾಶಿ ಇವರ ಮಾರ್ಗದರ್ಶನದಲ್ಲಿ ನಡೆದ ಸದರಿ ಕಾರ್ಯಾಚರಣೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಎಮ್.ಎಮ್ ಕಣಗಿ, ಆರ‍್ಬಿ ಪಾಟೀಲ ಸುಪ್ರಿತಾ ಅಂಗಡಿ ಹಾಗೂ ಕೃಷಿ ಅಧಿಕಾರಿಗಳಾದ ಎಮ್.ಎ ಕಡಪಟ್ಟಿ ಉಪಸ್ಥಿತರಿದ್ದರು.

 

ಸಿನಿಮಾ ಶೂಟಿಂಗ್ ವೇಳೆ ಮತ್ತೊಂದು ಅವಘಡ; ನಟ ಪ್ರಕಾಶ್ ರಾಜ್ ಆಸ್ಪತ್ರೆಗೆ ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button