Kannada NewsKarnataka NewsLatest

ದೇವಸ್ಥಾನಗಳು ಓಪನ್: ಷರತ್ತು ಅನ್ವಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೋವಿಡ್-೧೯ (ಕರೋನಾ) ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಮತ್ತು ಭಕ್ತಾಧಿಗಳ ಆರೋಗ್ಯ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಭಕ್ತಾಧಿಗಳಿಗೆ ನಿಷೇಧಿಸಲಾಗಿದ್ದ ಬೆಳಗಾವಿ ಜಿಲ್ಲೆಯ ಪ್ರಮುಖ ದೇವಾಲಯಗಳನ್ನು ದರ್ಶನಕ್ಕೆ ಮುಕ್ತಗೊಳಿಸಿ, ಸೆ.೨೨ ರಿಂದ ಷರತ್ತು ಬದ್ಧ ಅನುಮತಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ಆಗಿರುವ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಪ್ರಮುಖ ದೇವಾಲಯಗಳಾದ ಸವದತ್ತಿಯ ಜೋಗುಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನ, ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಕ್ಕ ದೇವಿಯ ದೇವಸ್ಥಾನ, ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿಯ ಹೊಳೆಮ್ಮ ದೇವಿಯ ದೇವಸ್ಥಾನ ಹಾಗೂ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯ ದೇವಸ್ಥಾನಗಳ ದರ್ಶನಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಈವರೆಗೂ ಜಿಲ್ಲೆಯ ಜನರ ಸಹಕಾರ ಹಾಗೂ ಮಾರ್ಗಸೂಚಿಗಳ ಪಾಲನೆಯಿಂದಾಗಿ ವೈರಾಣುವಿನ ಹರಡುವಿಕೆಯು ಹತೋಟಿಗೆ ಬರುತ್ತಿರುವುದರಿಂದ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳು, ಚರ್ಚಗಳು, ಮಸೀದಿಗಳು, ಎಲ್ಲಾ ಶ್ರದ್ಧಾ ಭಕ್ತಿ ಕೇಂದ್ರಗಳು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಂಡಿರುವುದನ್ನು ಪರಿಗಣ ಸಿ ಮತ್ತು ಜಿಲ್ಲೆಯ ಹಲವಾರು ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕ ಭಕ್ತಾಧಿಗಳ ಮನವಿಗಳನ್ನು ಪರಿಗಣ ಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ದೇವಾಲಯಗಳಿಗೆ ಷರತ್ತುಬದ್ಧ ಅನುಮತಿ:
ದೇವಾಲಯಗಳ ದರ್ಶನ ಅನುಮತಿ ಆದೇಶವು ಸೆ.೨೨ ರಿಂದ ಅನ್ವಯವಾಗಲಿದ್ದು, ದೇವಾಲಯಗಳ ಜನಸಂದಣಿ ಸೇರುವಂತಹ ವಿಶೇಷ ಉತ್ಸವ, ಜಾತ್ರೆ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

ಜಾತ್ರೆ ಉತ್ಸವಗಳ ಸಾಂಕೇತಿಕ ಆಚರಣೆ:
ಜಾತ್ರಾ ಉತ್ಸವ /ಬ್ರಹ್ಮ ರಥೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ದೇವಾಲಯದ ಆಗಮಿಕರು/ ತಂತ್ರಿಗಳು/ ಅರ್ಚಕರು/ ದೇವಾಲಯದ ಸಿಬ್ಬಂಧಿಗಳು ಸಾಂಕೇತಿಕವಾಗಿ ಹೋಮಾಧಿಗಳು, ಪ್ರಾಯಶ್ಚಿತ್ತಾಧಿಗಳನ್ನು ನಡೆಸಿ ಕೇವಲ ಉತ್ಸವಗಳನ್ನು ದೇವಾಲಯದ ಆವರಣ ಒಳಪ್ರಾಕಾರದೊಳಗೆ ಉತ್ತಮ ದಿನಗಳಲ್ಲಿ ಸಾರ್ವಜನಿಕರ ಸಂದಣ ಇಲ್ಲದಂತೆ ನಡೆಸಿ ಪೂರ್ಣಗೊಳಿಸಬೇಕು. ಅದರಂತೆ, ದೇವಾಲಯಗಳ ಎಲ್ಲ ಪ್ರಮುಖ ಉತ್ಸವ/ ಜಾತ್ರೆಗಳನ್ನು ಮುಂದಿನ ಆದೇಶದವರೆಗೆ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಿ ಪೂರ್ಣಗೊಳಿಸಬೇಕು.

ದೇವಾಲಯಗಳ ದರ್ಶಕ್ಕೆ ಆಗಮಿಸುವ ಸಾರ್ವಜನಿಕ ಭಕ್ತಾದಿಗಳಿಗೆ ಸಾಮಾಜಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ಸರಾಗವಾಗಿ ಸಾಗಲು ವ್ಯವಸ್ಥೆ ಕಲ್ಪಿಸಬೇಕು ಹಾಗೂ ಇನ್ನಿತರೆ ಎಲ್ಲ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಬೇಕು.

ಕೋವಿಡ್ -೧೯ ಮಾರ್ಗಸೂಚಿ ಪಾಲನೆ ಕಡ್ಡಾಯ :
ಸರ್ಕಾರದ ಮಾರ್ಗಸೂಚಿಯಲ್ಲಿ ಅತ್ಯಂತ ಪ್ರಮುಖವಾಗಿ ವಿಧಿಸಿದ ಸಾರ್ವಜನಿಕರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಕಟ್ಟುನಿಟ್ಟಿನ ಪಾಲನೆ, ಮುಖಗವಸು ಧರಿಸುವಿಕೆ, ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈ ತೊಳಿಯುವಿಕೆ ಅಥವಾ ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಬೇಕು.

ದೇವಾಲಯಗಳ ಪ್ರಾಂಗಣ ಪ್ರವೇಶ ಪೂರ್ವದಲ್ಲಿ ಸಾರ್ವಜನಿಕರ/ ಭಕ್ತಾಧಿಗಳ ದೇಹದ ಉಷ್ಣಾಂಶ ಪರಿಶೀಲಿಸಿ, ದೇಹದ ಉಷ್ಣಾಂಶ ಸುಸ್ಥಿತಿಯಲ್ಲಿರುವವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು.

ದಿನನಿತ್ಯ ಸಾರ್ವಜನಿಕ ಭಕ್ತಾಧಿಗಳ ಜನಜಂಗುಳಿಗೆ ಅವಕಾಶ ಕಲ್ಪಿಸಬಾರದು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್-೧೯ ನಿಯಂತ್ರಣಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:
ಕೋವಿಡ್-೧೯ (ಕರೋನಾ) ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಹೊರಡಿಸಿರುವ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಆಡಳಿತದವರ ವಿರುದ್ಧ ರಾಷ್ಟ್ರೀಯ ವಿಪತ್ತು
ನಿರ್ವಹಣಾ ಕಾಯ್ದೆ ೨೦೦೫ ರ ನಿಯಮಗಳಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಅಲ್ಲದೇ, ದರ್ಶನಕ್ಕೆ ಮುಕ್ತಗೊಳಿಸಿದ ತರುವಾಯ ಮಾರ್ಗಸೂಚಿಗಳ ಉಲ್ಲಂಘನೆ ಕಂಡುಬಂದಲ್ಲಿ, ಈ ಆದೇಶವನ್ನು ರದ್ದುಪಡಿಸಲಾಗುವುದು. ದೇವಾಲಯಗಳ ದರ್ಶನಕ್ಕೆ ಮುಕ್ತಗೊಳಿಸಿದ ತರುವಾಯ ಅವಶ್ಯವಿದ್ದಲ್ಲಿ ಪರಿಸ್ಥಿತಿ ಅವಲೋಕನೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳನ್ನು ವಿಧಿಸಲಾಗುವುದು.

ದೇವಾಲಯಗಳ ಸ್ಥಳೀಯ ಆಡಳಿತ ಪ್ರಾಧಿಕಾರಗಳು ದರ್ಶನಕ್ಕೆ ಮುಕ್ತಗೊಳಿಸಿದ ಬಗ್ಗೆ ಹಾಗೂ ಮಾರ್ಗಸೂಚಿಗಳ ಪಾಲನೆಯನ್ನು ದೃಢೀಕರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶದಲ್ಲಿ ತಿಳಿಸಿದ್ದಾರೆ.

ವಿವಾಹಿತ ಗ್ರಾಮ ಲೆಕ್ಕಿಗನೊಂದಿಗೆ ತಹಶೀಲ್ದಾರ್ ರಿಜಿಸ್ಟರ್ ಮ್ಯಾರೇಜ್; ಡಿಸಿ ಕಚೇರಿ ಮೆಟ್ಟಿಲೇರಿದ ಪತ್ನಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button