Latest

ಶ್ರೀಕೃಷ್ಣನ ವಿಗ್ರಹದ ಕೈ ತುಂಡಾಗಿದೆ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ದುಂಬಾಲು ಬಿದ್ದ ಅರ್ಚಕ

ಪ್ರಗತಿವಾಹಿನಿ ಸುದ್ದಿ; ಲಖನೌ: ಶ್ರೀಕೃಷ್ಣನ ವಿಗ್ರಹ ಶುಚಿಗೊಳಿಸುವಾಗ ವಿಗ್ರಹದ ಕೈ ತುಂಡಾಗಿ ಹಾನಿಯಾಗಿದ್ದು, ತಕ್ಷಣ ಚಿಕಿತ್ಸೆ ನೀಡುವಂತೆ ಅರ್ಚಕರೊಬ್ಬರು ವಿಗ್ರಹ ಸಮೇತ ಆಸ್ಪತ್ರೆಗೆ ಧಾವಿಸಿಬಂದ ವಿಚಿತ್ರ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಕೃಷ್ಣ ಮಂದಿರದ ಅರ್ಚಕ ಲೇಖ್ ಸಿಂಗ್, ಇಂದು ಮುಂಜಾನೆ ದೇವರ ವಿಗ್ರಹ ಶುಚಿಗೊಳಿಸುವಾಗ ವಿಗ್ರಹದ ಕೈ ಮುರಿದಿದೆ. ವಿಗ್ರಹವನ್ನು ಎತ್ತಿಕೊಂಡು ಆಸ್ಪತ್ರೆಗೆ ಆಗಮಿಸಿದ ಅರ್ಚಕ ವೈದ್ಯರ ಬಳಿ ಬಂದು ವಿಗ್ರಹಕ್ಕೆ ಚಿಕಿತ್ಸೆ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ. ಕೃಷ್ಣನ ಹೆಸರಲ್ಲಿ ನೋಂದಣಿ ಮಾಡಿಕೊಂಡು ಕೃಷ್ಣ ವಿಗ್ರಹದ ಕೈಗೆ ವೈದ್ಯರು ಬ್ಯಾಂಡೇಜ್ ಹಾಕಿ ಕಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ.ಅಶೋಕ್ ಕುಮಾರ್ ಅಗರ್ವಾಲ್, ಕೈಮುರಿದ ವಿಗ್ರಹದೊಂದಿಗೆ ಬಂದ ಅರ್ಚಕರೊಬ್ಬರು ಚಿಕಿತ್ಸೆ ನೀಡುವಂತೆ ಕಣ್ಣೀರಿಟ್ಟಿದ್ದಾರೆ. ಹಾಗಾಗಿ ಅರ್ಚಕರ ಭಾವನೆಗೆ ಸ್ಪಂದಿಸಿ ವಿಗ್ರಹಕ್ಕೆ ಬ್ಯಾಂಡೇಜ್ ಹಾಕಿದ್ದೇವೆ. ಅರ್ಚಕರು ಸಮಾಧಾನಗೊಂಡು ತೆರಳಿದ್ದಾರೆ ಎಂದು ಹೇಳಿದರು.
ಭೀಕರ ಮಳೆ; ಮನೆ ಕಳೆದುಕೊಡವರಿಗೆ ಪರಿಹಾರ ಘೋಷಣೆ

Home add -Advt

Related Articles

Back to top button