
ಪ್ರಗತಿವಾಹಿನಿ ಸುದ್ದಿ; ವಾರಣಸಿ: ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ದಶಾಶ್ವಮೇಧ ಘಾಟ್ ನಲ್ಲಿ ಆಯೋಜಿಸಲಾಗಿದ್ದ ಗಂಗಾರತಿಯನ್ನು ನೆರವೇರಿಸಿದರು.
ಇಂದು ಬೆಳಿಗ್ಗೆಯಿಂದ ವಾರಣಸಿಯಲ್ಲಿ ಬೀಡುಬಿಟ್ಟಿರುವ ಪ್ರಧಾನಿ ಮೋದಿ, ಮೊದಲು ಕಾಲಭೈರವ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗಂಗಾನದಿಯಲ್ಲಿ ತೀರ್ಥಸ್ನಾನ ಮಾಡಿ ಕಾಶಿವಿಶ್ವನಾಥನಿಗೆ ಗಂಗಾಜಲ ಅರ್ಪಿಸಿ, ಪೂಜೆ ನೆರವೇಸಿದರು.
ಸಂಜೆ ಕಾಶಿ ದಶಾಶ್ವಮೇಧದ ಘಾಟ್ ನಲ್ಲಿ ಗಂಗಾರತಿಯಲ್ಲಿ ಭಾಗವಹಿಸಿದರು. ದಶಾಶ್ವಮೇಧ ಘಾಟ್ ಬ್ರಹ್ಮ ಶಿವ ಗಂಗೆಯನ್ನು ಹೊತ್ತುತಂದಿರುವ ಸ್ಥಳ ಎಂಬ ಪ್ರತೀಥಿಯಿದೆ. ಹಿಂದೂ ಸಂಪ್ರದಾಯದಲ್ಲಿ ಗಂಗಾರತಿ ಶ್ರೇಷ್ಠ. 45 ನಿಮಿಷಗಳ ಕಾಲ ವೇದಘೋಷ, ಭಜನೆಗಳೊಂದಿಗೆ ಗಂಗಾರತಿ ನೆರವೇರಿತು. ಗಂಗಾ ತಟದಲ್ಲಿ ಬೆಳಗಿದ ಸಾವಿರಾರು ಗಂಗಾರತಿಯನ್ನು ನೆರೆದ ಜನರು ಕಣ್ತುಂಬಿಕೊಂಡರು.
ಗಂಗಾರತಿಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ 11 ರಾಜ್ಯಗಳ ಮುಖ್ಯಮಂತ್ರಿಗಳು, ಸಾಧು-ಸಂತರು, ಭಕ್ತರು ಭಾಗವಹಿಸಿದ್ದರು.