Kannada NewsKarnataka NewsLatest

ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ,ಕಲ್ಲೆಸೆತ ಪ್ರಕರಣದಲ್ಲಿ 38 ಜನರ ಬಂಧನ; ಮಂಗಳವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಆನಗೋಳ ಭೇಟಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಸುವರ್ಣಸೌಧ  ; ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಭಗ್ನಗೊಳಿಸಿ ಮತ್ತು ಕಲ್ಲೆಸೆತ ತೂರಿದ ಹಾಗೂ ಸರಕಾರಿ ವಾಹನಗಳನ್ನು ಹಾನಿಗೊಳಿಸಿದ ಪ್ರಕರಣದಲ್ಲಿ 38 ಜನರನ್ನು ಬಂಧಿಸಿ ಜೈಲುಗಟ್ಟಲಾಗಿದೆ; ಇನ್ನೂ ಬಹಳಷ್ಟು ಜನರನ್ನು ಬಂಧಿಸುವುದಿದ್ದು ಕಾರ್ಯಾಚರಣೆ ಮುಂದುವರಿದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದರು.
ವಿಧಾನಪರಿಷತ್‍ನಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ, ಶಿವಾಜಿ ಪ್ರತಿಮೆಗೆ ಮಸಿಬಳಿದಿರುವಿಕೆ, ಕಲ್ಲೆಸೆತ ಹಾಗೂ ಕನ್ನಡ ಧ್ವಜಕ್ಕೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಂಇಎಸ್‍ನಂತ ಕೆಲದುಷ್ಟ ಶಕ್ತಿಗಳು ತಮ್ಮ ತೀಟೆಗಾಗಿ ಹಾಗೂ ತಮ್ಮ ಅಸ್ತಿತ್ವವನ್ನು ತೋರ್ಪಡಿಸಿಕೊಳ್ಳಲು ಅನಗತ್ಯವಾಗಿ ಈ ರೀತಿಯ ದುಷ್ಕøತ್ಯಗಳನ್ನು ಮಾಡುತ್ತಿವೆ. ಪ್ರಚೋದನೆ ನೀಡಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಯತ್ನಿಸುವ ಎಂಇಎಸ್ ಪುಂಡರಿಗೆ ಇತ್ತೀಚೆಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮರಾಠ ಜನರೇ ಮಂಗಾಳರತಿ ಮಾಡಿದ್ದಾರೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಕನ್ನಡಿಗರು- ಮರಾಠರು ಅತ್ಯಂತ ಸಾಮರಸ್ಯದಿಂದ ಬದುಕುತ್ತಿದ್ದಾರೆ; ಇವರ ಪ್ರಚೋದನೆಯ ನಾಟಕ ಜನರ ಹತ್ತಿರ ನಡೆಯದು. ಈ ಮುಂಚೆ ಇವರು ನಡೆಸುತ್ತಿದ್ದ ಮಹಾಮೇಳಾವ್‍ಗೆ ಮಹಾರಾಷ್ಟ್ರದಿಂದ ಸಚಿವರು ಬಂದು ಪ್ರಚೋದನೆ ಮಾಡುತ್ತಿದ್ದರು. ಈ ರೀತಿ ಬರುವವರನ್ನು ರಾಜ್ಯದ ಗಡಿಯಲ್ಲಿಯೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಅವರನ್ನು ಜಾತಿ, ಭಾಷೆ ಮತ್ತು ಪ್ರಾಂತ್ಯದ ಚೌಕಟ್ಟಿನಡಿ ನೋಡುವುದಕ್ಕಾಗುವುದಿಲ್ಲ; ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರಾಃತಸ್ಮರಣೀಯರು;ಇಂತಹ ಮಹನೀಯರ ಪ್ರತಿಮೆಗೆ ಭಗ್ನಗೊಳಿಸುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ; ಅಂತಹ ಪುಂಡರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಈ ರೀತಿಯ ಕ್ರಮಕೈಗೊಳ್ಳುವ ಸಂದರ್ಭದಲ್ಲಿ ಅಮಾಯಕರನ್ನು ಹಿಡಿದು ಹಿಂಸಿಸಬೇಡಿ  ಮತ್ತು ದುಷ್ಕøತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಸಚಿವ ಅರಗ ಜ್ಞಾನೇಂದ್ರ ಅವರು ನೆಲ-ಜಲ-ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಸದಾಬದ್ಧವಿದೆ ಎಂದು ಪುನರುಚ್ಚರಿಸಿದ ಸಚಿವರು ಈ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರ ಸರಕಾರದೊಂದಿಗೆ ಮಾತನಾಡಲಾಗಿದೆ ಎಂದರು.
ಈ ವಿಷಯದಲ್ಲಿ ಜನರು ಕೂಡ ಕೆರಳುವ ಅಗತ್ಯವಿಲ್ಲ. ಇಡೀ ದೇಶದಲ್ಲಿಯೇ ಅತ್ಯುನ್ನತ ಪೊಲೀಸ್ ವ್ಯವಸ್ಥೆ ಹೊಂದಿರುವ ರಾಜ್ಯ ನಮ್ಮದು;ದುಷ್ಕೃತ್ಯ ಎಸಗಿದವರನ್ನು ಮನ್ನಿಸುವ ಪ್ರಶ್ನೆಯೇ ಇಲ್ಲ. ಈ ರಾಜ್ಯದಲ್ಲಿ ಮನಸೋಇಚ್ಛೆ ಬದುಕಬಹುದು ಮತ್ತು ಏನನ್ನು ಮಾಡಿದರೂ ನಡೆಯುತ್ತದೆ ಎನ್ನುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ಸದನದಲ್ಲಿ ನಡೆದ ಚರ್ಚೆಯಲ್ಲಿ ಅನೇಕ ಸದಸ್ಯರು ಪಾಲ್ಗೊಂಡು ಈ ಘಟನೆಯನ್ನು ಖಂಡಿಸಿದರು.
ಈ ಘಟನೆಗೆ ಕಾರಣರಾದ ಪುಂಡರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷ ನಿಯಮಗಳಡಿ ಜೈಲುಗಟ್ಟಬೇಕು ಮತ್ತು ಈ ರೀತಿಯ ಘಟನೆಗಳಾಗದಂತೆ ಎಚ್ಚರವಹಿಸಬೇಕು. ಪ್ರತಿಮೆಗಳನ್ನು ಸಂರಕ್ಷಿಸಲು ಕಾಯ್ದೆಗಳಿದ್ದರೇ ಪರಿಷ್ಕರಿಸಿ ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಆನಗೋಳಕ್ಕೆ ಭೇಟಿ

ಗೃಹ ಸಚಿವ ಅರಗ ಜ್ಞಾನೇಂದ್ರ  ಮಂಗಳವಾರ ಆನಗೋಳದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ ಮಾಡಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಅವರು ಭೇಟಿ ನೀಡುವರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button