Latest

ಮೇ 16ರಿಂದ ಶಾಲೆ ಆರಂಭಿಸದಿರಲು ಹೊರಟ್ಟಿ ನೀಡಿದ ಗಂಭೀರ ಎಚ್ಚರಿಕೆ ಏನು?

ಮಕ್ಕಳು ಸನ್  ಸ್ಟ್ರೋಕ್ ಗೆ ಒಳಗಾಗುವ ಸಂಭವ

 

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ –  ಮೇ 16ರಿಂದ ಶಾಲೆ ಆರಂಭಿಸಿದರೂ ಪಾಲಕರು ಮಕ್ಕಳನ್ನು ಕಳಿಸಲು ಸಿದ್ಧರಿಲ್ಲ. ಹಾಗಾಗಿ ಪರಿಷ್ಕೃತ ಆದೇಶ ಹೊರಡಿಸಿ ಜೂನ್ 1ರಿಂದ ಶಾಲೆ ಆರಂಭಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

Home add -Advt

ಹೊರಟ್ಟಿ ಬರೆದ ಪತ್ರದ ಸಾರಾಂಶ ಇಲ್ಲಿದೆ –

ಹಿಂದೆಂದೂ ಕಂಡರಿಯದ ಬಿರು ಬಿಸಿಲಿನ ಬೇಗೆಯು ಈ ವರ್ಷ ದೇಶದಾದ್ಯಂತ ಇದ್ದು, ರಾಜ್ಯದಲ್ಲೂ ಕೂಡಾ ಬಿಸಿಲಿನ ಬೇಗೆಯಲ್ಲಿ ಜನ ಹಾಗೂ ಜಾನುವಾರುಗಳು ತೊಂದರೆಪಡುತ್ತಿರುವದು ತಮಗೂ ಗೊತ್ತಿದೆ. ಅದರಲ್ಲಿಯೂ ಉತ್ತರ  ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರಿಬಿಸಿಲು ಮಧ್ಯಾಹ್ನದ ಹೊತ್ತಿನಲ್ಲಿ ರಣ ರಣ ನೆತ್ತಿಯನ್ನು
ಸುಡುತ್ತಲಿದೆ.
ಇಂಥ ಕಡು ಬೇಸಿಗೆಯಲ್ಲಿ ರಾಜ್ಯದಲ್ಲಿನ ಪ್ರಾಥಮಿಕ ಶಾಲೆಗಳನ್ನು ಮೇ ೧೬ ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿರುವದು ಎಳೆಯ ಮಕ್ಕಳ ಪಾಲಕರಿಗೆ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಶಾಲೆಗಳನ್ನು ಮೇ ೧೬ ರಿಂದ ಪ್ರಾರಂಭಿಸಿದರೂ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಿಲ್ಲವೆಂಬುದನ್ನು ನಾನು ಸ್ವತಃ ಮನಗಂಡಿದ್ದೇನೆ. ಒಂದು ವೇಳೆ ಮೇ ೧೬ ಕ್ಕೆ ಶಾಲೆಗಳನ್ನು ಪ್ರಾರಂಭಿಸಿದರೆ ಉತ್ತರ ಭಾರತದಲ್ಲಿ ಮಕ್ಕಳು ಸನ್  ಸ್ಟ್ರೋಕ್ ಗೆ ಒಳಗಾಗುವಂತೆ ರಾಜ್ಯದಲ್ಲಿಯೂ ಅಂತಹ ಪರಿಸ್ಥಿತಿ ಎದುರಾಗುವ ಸಂಭವವಿದೆ.
ಆದ್ದರಿಂದ ಮಕ್ಕಳ ಹಿತದೃಷ್ಟಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಜೂನ್ ೧ ರಿಂದ ಪ್ರಾರಂಭಿಸಲು ಸರಕಾರ ಆದೇಶ ಹೊರಡಿಸುವದು ಸೂಕ್ತ. ಕಡಿಮೆ ಬೀಳುವ ಶೈಕ್ಷಣಿಕ ದಿನಗಳಲ್ಲಿ ಪ್ರತಿ ಶನಿವಾರ ಹೆಚ್ಚುವರಿ ಪಿರಿಯಡ್‌ಗಳನ್ನು ತೆಗೆದುಕೊಳ್ಳುವದರ ಮೂಲಕ
ಸರಿಪಡಿಸಬಹುದಾಗಿದ್ದು ಕೂಡಲೇ ಜೂನ್ ೧ ರಿಂದ ಶಾಲೆಗಳನ್ನು ಪ್ರಾರಂಭಿಸಲು ಪರಿಷ್ಕೃತ ಆದೇಶ ಹೊರಡಿಸಲು ಕೋರುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಶಾಲೆಗಳ ಬೇಸಿಗೆ ರಜೆ ವಿಸ್ತರಣೆಗೆ ಮುಖ್ಯಮಂತ್ರಿ ಸಮ್ಮತಿ?

Related Articles

Back to top button