*ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಮಾಹಿತಿ: ಇಂದಿನಿಂದ ಹೊಸ ನಿಯಮ ಜಾರಿ*

ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿ ಮೆಸೇಜಿಂಗ್ ಆ್ಯಪ್ಗಳ ಬಳಕೆಗೆ ಇಂದಿನಿಂದ ಹೊಸ ಮತ್ತು ಕಠಿಣ ನಿಯಮಗಳು ಜಾರಿಗೆ ಬರುತ್ತಿವೆ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ‘ಟೆಲಿಕಾಂ ಕಾಯ್ದೆ 2023’ರ ಅಡಿಯಲ್ಲಿ ಸಿಮ್ ಬೈಂಡಿಂಗ್ ಎಂಬ ಹೊಸ ನಿಯಮವನ್ನು ಪರಿಚಯಿಸಿದೆ.
ಇದರ ಪ್ರಕಾರ, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಖಾತೆಗಳು ಕಾರ್ಯನಿರ್ವಹಿಸಲು ನಿಮ್ಮ ಮೊಬೈಲ್ನಲ್ಲಿ ಆ ನಂಬರ್ನ ಸಕ್ರಿಯ ಸಿಮ್ ಕಾರ್ಡ್ ಇರುವುದು ಕಡ್ಡಾಯ. ಸಿಮ್ ತೆಗೆದರೆ, ಸ್ಟಾಪ್ ಮಾಡಿದರೆ ಅಥವಾ ನಿಷ್ಕ್ರಿಯಗೊಂಡರೆ ನಿಮ್ಮ ಮೆಸೇಜಿಂಗ್ ಆ್ಯಪ್ ಖಾತೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.
ಇಂದಿನಿಂದ ವಾಟ್ಸ್ಆ್ಯಪ್ ವೆಬ್ ಮತ್ತು ಡೆಸ್ಕ್ಟಾಪ್ ಸೆಷನ್ಗಳು ಪ್ರತಿ ಆರು ಗಂಟೆಗಳಿಗೊಮ್ಮೆ ಸ್ವಯಂಚಾಲಿತವಾಗಿ ಲಾಗೌಟ್ ಆಗಲಿವೆ. ಕಚೇರಿ ಕೆಲಸಗಳಿಗೆ ವಾಟ್ಸ್ಆ್ಯಪ್ ಬಳಸುವವರು ಪ್ರತಿ ಆರು ಗಂಟೆಗೊಮ್ಮೆ ತಮ್ಮ ಫೋನ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ OTP ಪರಿಶೀಲನೆ ಮಾಡಬೇಕಾಗುತ್ತದೆ. ಈ ನಿಯಮಗಳಿಂದ ಸಾಮಾನ್ಯ ಬಳಕೆದಾರರು ಆತಂಕಪಡಬೇಕಿಲ್ಲ, ಆದರೆ ತಮ್ಮ ಪ್ರಾಥಮಿಕ ಮೊಬೈಲ್ನಲ್ಲಿ ಸಿಮ್ ಕಾರ್ಡ್ ಇರಿಸಿಕೊಳ್ಳುವುದು ಮತ್ತು ಆ್ಯಪ್ಗಳನ್ನು ಅಪ್ಡೇಟ್ ಮಾಡುವುದು ಅನಿವಾರ್ಯ.
ಸೈಬರ್ ಭದ್ರತೆಯನ್ನು ಹೆಚ್ಚಿಸಲು ಮತ್ತು ಆನ್ಲೈನ್ ವಂಚನೆಗಳನ್ನು ತಡೆಯಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಯಮದಿಂದ, ಕದ್ದ OTP ಗಳನ್ನು ಬಳಸಿ ವಂಚನೆ ನಡೆಸುತ್ತಿದ್ದ ಸೈಬರ್ ಖದೀಮರಿಗೆ ಕಡಿವಾಣ ಬೀಳಲಿದೆ.




