Belagavi NewsBelgaum NewsKannada NewsKarnataka NewsNationalPolitics

*ಒಂಬತ್ತು ನಿಮಿಷಕ್ಕೆ ಒಬ್ಬ ವಿವಾಹಿತ ಪುರುಷ ಆತ್ಮಹತ್ಯೆ!* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದಲ್ಲಿ ಪ್ರತಿ ಒಂಬತ್ತು ನಿಮಿಷಕ್ಕೆ ಒಬ್ಬ ವಿವಾಹಿತ ಪುರುಷ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ದಿನವೊಂದಕ್ಕೆ 168 ವಿವಾಹಿತ ಪುರುಷರ ಆತ್ಮಹತ್ಯೆ ನಡೆಯುತ್ತಿದೆ.  ಇದು  ಪುರುಷರ ಮೇಲೆ ಪ್ರಸ್ತುತ ದಿನಮಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣವನ್ನು ಸೂಚಿಸುತ್ತದೆ ಎಂದು ಹಿರಿಯ ಪತ್ರಕರ್ತ ಮುರುಗೇಶ ಶಿವಪೂಜಿ ಕಳವಳ ವ್ಯಕ್ತಪಡಿಸಿದರು.

ಅವರು ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ನಾಡಹಬ್ಬ ಉತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪುರುಷರ ಮೇಲೆ ದೌರ್ಜನ್ಯ’ ಕುರಿತು ಅವರು ಉಪನ್ಯಾಸ ನೀಡಿದರು.

2005 ರಿಂದ 2010 ರ ವರೆಗೆ 3,42,812 ವಿವಾಹಿತ ಪುರುಷರು (66%) ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದೇ ರೀತಿ 1,81,399 ವಿವಾಹಿತ ಮಹಿಳೆಯರು(34%) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು “ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ” ವರದಿ ಹೇಳುತ್ತದೆ

ಪ್ರತಿ 19 ನಿಮಿಷಕ್ಕೆ ಒಬ್ಬ ವಿವಾಹಿತ ಪುರುಷನ ಕೊಲೆಯಾಗುತ್ತದೆ ಅದೇ ರೀತಿ ಪ್ರತಿ 66 ನಿಮಿಷಕ್ಕೆ ಒಬ್ಬ ವಿವಾಹಿತ ಮಹಿಳೆಯ ಕೊಲೆ ನಡೆಯುತ್ತದೆ. 

 2018 ರಿಂದ 21 ರವರೆಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಪುರುಷರ ಸಂಖ್ಯೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಸ್ತ್ರೀಯರಿಗೆ ಹೋಲಿಸಿದರೆ ಮೂರೂವರೆ ಪಟ್ಟು ಅಧಿಕವಾಗಿದೆ.

2015 ರಿಂದ 2021 ರವರೆಗೆ  ವಾರ್ಷಿಕ ಸರಾಸರಿ 64,000 ದಿಂದ  81000 ದವರೆಗೆ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ವಾರ್ಷಿಕ  ಸರಾಸರಿ  25000 ದಿಂದ 28000 ವಿವಾಹಿತ ಸ್ತ್ರೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದವರು ವಿವರಗಳನ್ನು ನೀಡಿದರು.

ಲೈಂಗಿಕ ಕಿರುಕುಳ ನೀಡಿದ ಆರೋಪಗಳ ಮೇಲೆ 2018 ದಿಂದ 2021 ರವರೆಗೆ ಕ್ರಮವಾಗಿ 92, 114, 97613, 108532,  118979 ಪ್ರಕರಣಗಳು ದಾಖಲಾಗಿದ್ದು ಆ ಪೈಕಿ 40% ಸುಳ್ಳು ದಾಖಲೆಗಳೆಂದು ಎನ್‌ಜಿವೊ ಗಳು ನೀಡಿದ ವರದಿಯಿಂದ ತಿಳಿದು ಬರುತ್ತದೆ . ಹರಿಯಾಣಾ, ತಮಿಳುನಾಡು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಇಂತಹ ಪ್ರಕರಣಗಳು ಅತ್ಯಧಿಕವಾಗಿವೆ ಇವನ್ನು ತಡೆಯುವ ನಿಟ್ಟಿನಲ್ಲಿ ಪ್ರತಿವರ್ಷದ ” ನವೆಂಬರ್ 19 ನ್ನು ಅಂತರರಾಷ್ಟ್ರೀಯ ಪುರುಷರ ದಿನಾಚರಣೆ ” ಯನ್ನಾಗಿ ಮತ್ತು ಪ್ರತಿವರ್ಷ ” ಮೇ 16 ಅನ್ನು ಬಾಲಕರ ದಿನಾಚರಣೆ ” ಯನ್ನಾಗಿ ಆಚರಿಸಲಾಗುತ್ತಿದೆ ಇದು ಯಾರಿಗೂ ಗೊತ್ತೇ ಇಲ್ಲ.

ಈ ಎಲ್ಲ  ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಸರಾಸರಿ ವರ್ಷವೊಂದಕ್ಕೆ 1 ಲಕ್ಷಕ್ಕೂ ಅಧಿಕ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ವಿವಾಹಿತ ಮಹಿಳೆಯರ  ಆತ್ಮಹತ್ಯೆ ಪ್ರಕರಣ ವಾರ್ಷಿಕ 30 ಸಾವಿರ ಇದೆ. ವಿವಾಹಿತ ಮಹಿಳೆಯರ ಆತ್ಮಹತ್ಯೆ ಪ್ರಮಾಣಕ್ಕೆ ಹೋಲಿಸಿದರೆ, ವಿವಾಹಿತ ಪುರುಷರ ಆತ್ಮಹತ್ಯೆ ಪ್ರಮಾಣ ಮೂರುವರೆ ಪಟ್ಟು ಅಧಿಕವಿದೆ . ಪುರುಷರ ಸಂರಕ್ಷಣೆಗಾಗಿ ದೇಶದಾದ್ಯಂತ 15ರಿಂದ 20 ಸರ್ಕಾರೇತರ ಸಂಸ್ಥೆಗಳು  ಕಾರ್ಯನಿರ್ವ‌ ಹಿಸುತ್ತಿವೆ.

ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಬಹಳಷ್ಟು ಸಂಕಟಕ್ಕೆ ಒಳಗಾಗುವ ಸ್ಥಿತಿ ಪುರುಷರದ್ದೇ ಆಗಿರುತ್ತದೆ , ಎಷ್ಟೋ ಬಾರಿ ಸುಳ್ಳು ಪ್ರಕರಣ ಪ್ರಕರಣ ದಾಖಲಾಗಿ, ಬಹಳಷ್ಟು ಬಾರಿ ಕೂಡ ಪುರುಷರೇ ಬಲಿಪಶುಗಳಾಗುತ್ತಾರೆ ಎಂದರು.

 ಪುರುಷ ನಿರಂತರವಾಗಿ ಒಂದಿಲ್ಲೊಂದು ಕಾರಣಕ್ಕೆ ಮಾನಸಿಕ ಹಿಂಸೆ ಅನುಭವಿಸುತ್ತಲೇ ಇರುತ್ತಾನೆ. ಒಂದು ಹಂತದಲ್ಲಿ ಆತ ಮನೆಯ ಎಟಿಎಂ ಆಗಿರುತ್ತಾನೆ. ಆ ಎಟಿಎಂ ಬಂದ್ ಆದ ದಿವಸ ಆತನಿಗೆ ದೇವರೇ ಗತಿ? ಎಂದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಧಾರ್ಮಿಕ ದತ್ತಿ ಇಲಾಖೆಯ ನಿವೃತ್ತ ಅಧಿಕಾರಿ ರವಿ ಕೊಟಾರಗಸ್ತಿ, ಜಗತ್ತಿಗೆ ಮಾದರಿಯಾಗುವಂತೆ ಸಂಸ್ಕೃತಿಯನ್ನು ಹೊಂದಿದ್ದ ಭಾರತ ಇಂದು ಸಾಂಸ್ಕೃತಿಕ ನಡೆದಿದೆ ಅದರ ಉಳಿವಿಗಾಗಿ ಇಂದಿನಿಂದಲೇ ಶಿಕ್ಷಣ ಸಂಸ್ಥೆಗಳು ಮತ್ತು ಮಠಮಾನ್ಯಗಳಿಂದ ಕಾರ್ಯಕ್ರಮಗಳು ಆಗಬೇಕಾಗಿದೆ ಎಂದರು.

ಹಾವೇರಿಯ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ವಿಜಯಲಕ್ಷ್ಮಿ ಪುಟ್ಟಿ ಅವರು, ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಉಪನ್ಯಾಸ ನೀಡಿ ಇತಿಹಾಸ ಕಾಲದಿಂದಲೂ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅದು ಇಂದಿಗೂ ಮುಂದುವರಿದಿದೆ. ಸಮೀಪದ ಸಂಬಂಧಿಕರಿಂದಲೇ ಎಷ್ಟೋ ಬಾರಿ ಅತ್ಯಾಚಾರ ನಡೆಯುತ್ತದೆ ಅತ್ಯಾಚಾರಕ್ಕೆ ಒಳಗಾಗುವವರು ಚಿಕ್ಕವರು ದೊಡ್ಡವರಿಗೂ ಭೇದವಿಲ್ಲದೆ ಬಲಿಯಾಗುತ್ತಿದ್ದಾರೆ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಲೇ ಇದೆ. ಅದನ್ನು ನಿಲ್ಲಿಸುವ ಕಾರ್ಯವಾಗಬೇಕು ಎಂದರು. 

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿ ಪುರುಷರ ಮೇಲೆ ಅದರಲ್ಲೂ ವಯಸ್ಸಾದ ಪುರುಷರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಮ್ಮ ಸುತ್ತಲೂ ಆಗಾಗ ಕಂಡು ಬರುತ್ತದೆ. ಒಂದು ಹಂತದಲ್ಲಿ ಅಸಹಾಯಕರಾಗಿ ಏನು ಮಾಡದ ಸ್ಥಿತಿಯಲ್ಲಿ ನಾವಿದ್ದೇವೆ. ಇದು ನಿಲ್ಲಬೇಕು, ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು. 

ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಎಚ್.ಬಿ.ರಾಜಶೇಖರ, ಕಾರ್ಯದರ್ಶಿ ಸಿ.ಕೆ.ಜೋರಾಪುರ, ಪ್ರಾಚಾರ್ಯ ಪಾಟೀಲ, ಕಾಡಪ್ಪನವರ, ಪ್ರೊ.ಎಂ.ಎಸ್.ಇಂಚಲ ವೇದಿಕೆ ಮೇಲಿದ್ದರು. ಮಾವಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button