
ಪ್ರಗತಿವಾಹಿನಿ ಸುದ್ದಿ, ಮುಂಬೈ – ಮುಂಬೈ ಪ್ರೀಮಿಯರ್ ಲೀಗ್ (ಎಂಪಿಎಲ್) ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತ ಕಾರ್ಯದರ್ಶಿ ಮತ್ತು ಶಿವಸೇನೆ ಪಕ್ಷದ ಕಾರ್ಯದರ್ಶಿ ಮಿಲಿಂದ್ ನಾರ್ವೇಕರ್ ಹಾಗೂ ಸುರೇಶ್ ಸಮತ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಕ್ರಿಕೆಟ್ ಅಸೋಸಿಯೇಶನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಂಸಿಎ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ವಿಶೇಷವಾಗಿ, ಈ ಸಭೆಯಲ್ಲಿ ಶರದ್ ಪವಾರ್ ಸೇರಿದಂತೆ, ಪಿ.ವಿ ಶೆಟ್ಟಿ, ಗೌರವ ಪಯ್ಯಾಡೆ, ವಿಹಂಗ ನಾಯಿಕ್ ಮತ್ತು ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು.
ಓರ್ವ ಸಾಮಾನ್ಯ ಕಾರ್ಯಕರ್ತನಿಂದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತ ಕಾರ್ಯದರ್ಶಿಯಾಗಿರುವ ಮಿಲಿಂದ್ ನಾರ್ವೇಕರ್, ಪಕ್ಷ ನೀಡಿರುವ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರಿಂದಲೇ ಅವರನ್ನು ಇತ್ತಿಚೇಗೆ ಶಿವಸೇನೆ ಪಕ್ಷದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು ರಾಜ್ಯಪಾಲ ನಿಯುಕ್ತ ಶಾಸಕರ ಪಟ್ಟಿಯಲ್ಲಿ ನಾರ್ವೇಕರ್ ಅವರ ಹೆಸರು ಅಗ್ರಸ್ಥಾನದಲ್ಲಿತ್ತು.
ಆದರೆ, ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರಿಂದ ಅವರ ಆಪ್ತ ವಲಯದಲ್ಲಿರುವ ನಾರ್ವೇಕರ್ ತನ್ನ ಜೊತೆಗಿದ್ದು ಕೆಲಸ ಮಾಡಬೇಕೆಂದು ಠಾಕ್ರೆ ಇಚ್ಛೆ ವ್ಯಕ್ತಪಡಿಸಿದ್ದರಿಂದ ಅಂತಿಮ ಗಳಿಗೆಯಲ್ಲಿ ಶಾಸಕರ ಪಟ್ಟಿಯಿಂದ ನಾರ್ವೇಕರ್ ಅವರ ಹೆಸರನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಆದರೆ, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ನಡೆದ ಚರ್ಚೆಯ ನಂತರ ಅವರನ್ನು ಎಂಪಿಎಲ್ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖಂಡ ಮನೋಹರ್ ಜೋಶಿ ಮುಂಬೈ ಕ್ರಿಕೆಟ್ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು. ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಅವರ ನಂತರ ಮಿಲಿಂದ್ ನಾರ್ವೆಕರ್ ಬಹಳ ಸಮಯದ ನಂತರ ಶಿವಸೇನಾ ಪಕ್ಷದಿಂದ ಎಂಸಿಎ ವ್ಯಾಪ್ತಿಗೆ ಪ್ರವೇಶಿಸಿದ್ದಾರೆ.