Belagavi NewsBelgaum NewsKannada NewsKarnataka News

*ಖಾಸಗಿ ಎಪಿಎಂಸಿ ಬಂದ್‌ಗೆ ಕ್ರಮ: ಬೆಳಗಾವಿ ಜಿಲ್ಲೆ ರೈತ ಮುಖಂಡರಿಗೆ ಸಚಿವ ಶಿವಾನಂದ ಪಾಟೀಲ ಭರವಸೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಖಾಸಗಿ ಜೈ ಕಿಸಾನ್‌ ಹೋಲ್‌ಸೇಲ್‌ ವೆಜಿಟೆಬಲ್‌ ಮಾರ್ಕೆಟ್‌ ಬಂದ್‌ ಮಾಡಲು ಸರ್ಕಾರ ಹಿಂದೇಟು ಹಾಕುವುದಿಲ್ಲ. ಈ ವಿಚಾರದಲ್ಲಿ ರೈತರಿಗೆ ಸಂದೇಹವೇ ಬೇಡ, ಖಾಸಗಿ ಎಪಿಎಂಸಿ ಬಂದ್‌ ಮಾಡುವುದು ನಿಶ್ಚಿತವಾಗಿದ್ದು, ಅನಿವಾರ್ಯವಾದರೆ ಕಾಯ್ದೆ ತಿದ್ದುಪಡಿ ಮಾಡಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ತಕ್ಷಣ ಬಂದ್‌ ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ರೈತ ಮುಖಂಡರ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಖಾಸಗಿ ಎಪಿಎಂಸಿ ಬಂದ್‌ ಮಾಡಲು ಪೂರಕ ದಾಖಲೆಗಳ ಅಗತ್ಯವಿದೆ. ನಿಮ್ಮ ಬಳಿ  ಇರುವ ದಾಖಲೆಗಳನ್ನು ಕೊಡಿ. ಅಧಿಕಾರಿಗಳಿಂದಲೂ ವರದಿ ಪಡೆಯಲಿದ್ದು, ಯಾವುದೇ ಕಾನೂನಿನ ತೊಡಕಿಗೆ ಅವಕಾಶ ಇಲ್ಲದಂತೆ ಹೆಜ್ಜೆ ಇಡಬೇಕಾಗುತ್ತದೆ.  ಅಕ್ರಮವಾಗಿ ಕಮಿಷನ್‌ ಪಡೆದು ರೈತರನ್ನು ವಂಚಿಸಿರುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಬೆಳಗಾವಿಯಿಂದ ಆಗಮಿಸಿದ್ದ ಭಾರತೀಯ ಕೃಷಿಕ ಸಮಾಜ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತರೊಂದಿಗೆ ಬುಧವಾರ ಬೆಂಗಳೂರಿನ ಕೃಷಿ ಮಾರುಕಟ್ಟೆ ಇಲಾಖೆ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು, ಖಾಸಗಿ ಎಪಿಎಂಸಿ ಬಂದ್‌ಗೆ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಸಹಕಾರದ ಅಗತ್ಯವಿದೆ. ಹೀಗಾಗಿ ಸ್ವಲ್ಪ ಸಮಯ ಬೇಕಾಗಲಿದೆ ಎಂದು ಹೇಳಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಖಾಸಗಿ ಎಪಿಎಂಸಿಗೆ ಅನುಮತಿ ನೀಡಲಾಗಿದೆ. ತಕ್ಷಣ ರದ್ದು ಕ್ರಮ ಕೈಗೊಳ್ಳಲು ಈ ಸಮಸ್ಯೆ ಒಂದೇ ಇಲಾಖೆ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರವನ್ನೂ ಪಡೆಯಬೇಕಾಗುತ್ತದೆ. ರೈತ ಮುಖಂಡರನ್ನೊಳಗೊಂಡ ಸಮಿತಿ ರಚನೆ ಮಾಡಿ ವರದಿ ಸಿದ್ಧಪಡಿಸಿ ನಂತರ ಬಂದ್‌ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

Home add -Advt

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ, ನಗರಾಭಿವೃದ್ಧಿಸಚಿವ ಭೈರತಿ ಸುರೇಶ್ ಅವರೊಂದಿಗೆ ಶೀಘ್ರದಲ್ಲಿ ಸಭೆ ನಡೆಸಲಿದ್ದು, ಕಾನೂನಿನ ತೊಡಕು ಬಾರದಂತೆ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಎಪಿಎಂಸಿಗಳಿಗೆ ಅನುಮತಿ ನೀಡುವುದಿಲ್ಲ, ಉತ್ತೇಜನವನ್ನೂ ಕೊಡುವುದಿಲ್ಲ. ಸರ್ಕಾರ ರೈತರ ಪರವಾಗಿದೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಎಪಿಎಂಸಿ ಕಾಯ್ದೆಯನ್ನು ಮರುಸ್ಥಾಪನೆ ಮಾಡಿ ಎಲ್ಲ ಎಪಿಎಂಸಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

1.50 ರೂ. ಗಳಷ್ಟಿದ್ದ ಸೆಸ್‌ ಪ್ರಮಾಣವನ್ನು ರೈತರ ಹಿತರಕ್ಷಣೆ ಉದ್ದೇಶದಿಂದಲೇ 60 ಪೈಸೆಗೆ ಇಳಿಸಲಾಗಿದೆ. 1.50 ರೂ. ಸೆಸ್‌ ಇದ್ದ ಸಂದರ್ಭದಲ್ಲಿ ಆದಾಯ 600 ಕೋಟಿ ರೂ. ಇತ್ತು. 60 ಪೈಸೆಗೆ ಇಳಿಸಿದ ನಂತರವೂ ಸುಮಾರು 500 ಕೋಟಿ ರೂ. ಆದಾಯ ಬಂದಿದೆ. ರಾಜ್ಯದ ಎಪಿಎಂಸಿ ಇತಿಹಾಸದಲ್ಲೇ 40 ಸಾವಿರ ಕೋಟಿ ರೂ. ವಹಿವಾಟು ದಾಟಿರಲಿಲ್ಲ. ಆದರೆ ಈಗ 72 ಸಾವಿರ ಕೋಟಿ ರೂ. ದಾಟಿದೆ. ಡಿ ಮಾರ್ಟ್‌, ರಿಲಯನ್ಸ್‌ ನಂತಹ ಕಂಪನಿಗಳನ್ನೂಸಹ ಎಪಿಎಂಸಿ ಕಾಯ್ದೆ ಅಡಿಯಲ್ಲಿ ತರಲಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿ ಇರುವುದರಿಂದಲೇ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಪಿಎಂಸಿಗಳ ಆಸ್ತಿಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷ 18ರಿಂದ 20 ಕೋಟಿ ರೂ. ತೆಗೆದಿರಿಸಲಾಗುತ್ತಿದೆ. ಇನ್ನೂ ಐದಾರು ಹೊಸ ಎಪಿಎಂಸಿಗಳನ್ನು ಆರಂಭಿಸಲಾಗುತ್ತಿದೆ. 9 ಶೀತಲ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಖಾಸಗಿ ಎಪಿಎಂಸಿ ಬಂದ್‌ ಮಾಡಲು ಇರುವ ಅಂಶಗಳನ್ನು ವಿವರಿಸಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಮ್ತು ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಪರವಾನಗಿ ರದ್ದುಪಡಿಸಬಹುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಅವರು, ಇದು ಹಲವಾರು ವರ್ಷಗಳ ಹೋರಾಟ. ಖಾಸಗಿ ಎಪಿಎಂಸಿಯಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಅಲ್ಲಿ ಬೌನ್ಸರ್‌ಗಳನ್ನು ಇಡಲಾಗಿದೆ.  ಸರ್ಕಾರ ತಕ್ಷಣವೇ ಬಂದ್‌ಗೆ ಆದೇಶ ಮಾಡಬೇಕು. ಸರ್ಕಾರದ ಎಪಿಎಂಸಿ 83 ಎಕರೆ ವ್ಯಾಪ್ತಿಯಲ್ಲಿದ್ದು, ಇದನ್ನೇ ಅಭಿವೃದ್ಧಪಡಿಸಬೇಕು ಎಂದು ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯಿಂದ ಪ್ರತಿದಿನ 300 ಗಾಡಿ ತರಕಾರಿ ಗೋವಾಗೆ ಹೋಗುತ್ತಿದೆ. ಜಿಲ್ಲೆಯಲ್ಲಿ 3 ಲಕ್ಷ ರೈತರು ತರಕಾರಿ ಬೆಳೆಯುತ್ತಿದ್ದಾರೆ. ಸರ್ಕಾರ 300 ವರ್ತಕರ ಪರವಾಗಿ ನಿಲ್ಲದೆ 3 ಲಕ್ಷ ರೈತರ ಹಿತ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು. ಸರ್ಕಾರದ ಎಪಿಎಂಸಿಯಲ್ಲಿ ವಹಿವಾಟು ಇಲ್ಲದ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ವರ್ತಕರು ಅಳಲು ತೋಡಿಕೊಂಡರು. ಬೆಳಗಾವಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ರೈತ ಮುಖಂಡರು ಸರ್ಕಾರ ತಕ್ಷಣ ಖಾಸಗಿ ಎಪಿಎಂಸಿ ಬಂದ್‌ಗೆ ಆದೇಶ ಮಾಡಬೇಕು ಎಂದು ಆಗ್ರಹಪಡಿಸಿದರು. ಕೃಷಿ ಮಾರುಕಟ್ಟೆ ನಿರ್ದೇಶಕ ಶಿವಾನಂದ ಕಾಪಸೆ, ನಜೀಬುಲ್ಲಾ ಖಾನ್ ಮತ್ತಿತರ ಅಧಿಕಾರಿಗಳು ಇದ್ದರು

ಪ್ರಕಿಯೆ ಪಾಲನೆ ಅಗತ್ಯ

ಖಾಸಗಿ ಎಪಿಎಂಸಿಯನ್ನು ಏಕಾಏಕಿ ಬಂದ್‌ ಮಾಡಲು ಸಾಧ್ಯವಿಲ್ಲ. ಶೋಕಾಸ್‌ ನೋಟೀಸ್‌ ನೀಡಬೇಕು. ಲೋಪದೋಷಗಳ ಪಟ್ಟಿ ಸಿದ್ದಪಡಿಸಬೇಕು. ಕೆಲವು ಇಲಾಖೆಗಳು ಈ ಹಿಂದೆ ಮಾಡಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸರ್ಕಾರ ಈ ವಿಚಾರದಲ್ಲಿ ತನ್ನ ಇಚ್ಛಾಶಕ್ತಿ ತೋರುವುದರಲ್ಲಿ ರೈತರಿಗೆ ಸಂದೇಹವೇ ಬೇಡ.  ಪರವಾನಗಿ ರದ್ದು ಕ್ರಮಗಳು ಕಾನೂನುಬದ್ಧವಾಗಿ ನಡೆಯಬೇಕು. ಮತ್ತೆ ಕಾನೂನು ಸಮರಕ್ಕೆ ಅವಕಾಶ ಇರಬಾರದು. ಇದಕ್ಕೆ ರೈತ ಸಂಘಟನೆಗಳ ಸಹಕಾರ ಅಗತ್ಯ ಎಂದರು.

Related Articles

Back to top button