Film & Entertainment

*ಪ್ರೀತಿಸಿದ ಯುವತಿಗೆ ಬ್ಲ್ಯಾಕ್ ಮೇಲ್: ನಟ ವರುಣ್ ಆರಾಧ್ಯ ವಿರುದ್ಧ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿದ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ಖ್ಯಾತ ನಟ ವರುಣ್ ಆರಾಧ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

ಯುವತಿ ನೀಡಿದ ದೂರು ಆಧರಿಸಿ ಬೆಂಗಳೂರಿನ ಪಶ್ಚಿಮ ವಲಯ ಸಿಇಎನ್ ಠಾಣೆಯಲ್ಲಿ ಐಟಿ ಆಕ್ಟ್ ಅಡಿ ವರುಣ್ ಆರಾಧ್ಯ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮಾರ್ಕೆಟಿಂಗ್ ಮಾಡುತ್ತಿದ್ದ ಯುವತಿಯನ್ನು 2019ರಲ್ಲಿ ವರುಣ್ ಪರಿಚಯಿಸಿಕೊಂಡಿದ್ದ. ಯುವತಿ ಹಾಗೂ ವರುಣ್ ಪರಸ್ಪರ ಪ್ರೀತಿಸಿದ್ದರು. ನಾಲ್ಕು ವರ್ಷಗಳ ಕಾಲ ಪ್ರೀತಿ-ಪ್ರೇಮ ಎಂದು ಸುತ್ತಾಡಿದ್ದರು. 2023ರಲ್ಲಿ ಒಂದು ದಿನ ವರುಣ್ ಮೊಬೈಲ್ ನೋಡುವಾಗ ಯುವತಿಗೆ ಆಘಾತ ಎದುರಾಗಿತ್ತು. ಮೊಬೈಲ್ ನಲ್ಲಿ ವರುಣ್ ಬೇರೊಬ್ಬ ಯುವತಿ ಜೊತೆ ಇದ್ದ ಖಾಸಗಿ ಫೋಟೋಗಳು ಪತ್ತೆಯಾಗಿದ್ದವು.

ಇದರಿಂದ ನೊಂದ ಪ್ರೇಯಸಿ ಯುವತಿ, ವರುಣ್ ನನ್ನು ಪ್ರಶ್ನಿಸಿದ್ದಳಲ್ಲದೇ, ಆತನಿಂದ ದೂರಾಗಲು ಬಯಸಿ ಬ್ರೇಕಪ್ ಮಾಡಿಕೊಂಡಿದ್ದಳು. ಇದೇ ವಿಚಾರವಾಗಿ ವರುಣ್, ತಾನು ಬೇರೊಂದು ಯುವತಿಯ ಸಂಪರ್ಕದಲ್ಲಿರುವ ಬಗ್ಗೆ ಯಾರಿಗೂ ಬಾಯಿಬಿಡದಂತೆ ಯುವತಿಗೆ ಬೆದರಿಕೆ ಹಾಕಿದ್ದ. ಅಲ್ಲದೇ ತನ್ನ ಬಳಿ ನಿನ್ನ ಜೊತೆಗಿರುವ ಖಾಸಗಿ ಫೋಟೋ, ವಿಡಿಯೋಗಳೂ ಇದ್ದು, ಯಾರಿಗಾದರೂ ಬಾಯಿಬಿಟ್ಟರೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button