
ಪ್ರಗತಿವಾಹಿನಿ ಸುದ್ದಿ, ಸವದತ್ತಿ- ಹಿರಿಯ ಕಾಂಗ್ರೆಸ್ ನಾಯಕ, ಸಮಾಜ ಸೇವಕ ಆನಂದ ಚೋಪ್ರಾ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.
ಸವದತ್ತಿ ಕ್ಷೇತ್ರದಿಂದ 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದ ಅವರು, ಶನಿವಾರ ಬೆಳಗಿನಜಾವ ಹೃದಯಾಘಾತದಿಂದ ನಿಧನರಾದರು.
ಶುಕ್ರವಾರ ರಾತ್ರಿ ಹುಬ್ಬಳ್ಳಿಗೆ ಹೋಗಿ ಬಂದು ಮಲಗಿದ್ದ ಅವರು, ಶನಿವಾರ ಮುಂಜಾನೆ 5 ಗಂಟೆಗೆ ವಾಕಿಂಗ್ ಹೋಗಲು ಎದ್ದರಾದರೂ ಸಾಧ್ಯವಾಗದೆ ಮತ್ತೆ ಕುಸಿದು ಕುಳಿತು ಹೃದಯಾಘಾತಕ್ಕೊಳಗಾದರು.
ಅವರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಕೆಲವು ತಿಂಗಳ ಹಿಂದೆ ಅವರ ಮೇಲೆ ಅಪರಿಚಿತರಿಂದ ಹಲ್ಲೆ ಕೂಡ ನಡೆದಿತ್ತು.
ಹೆಬ್ಬಾಳಕರ್ ಸಂತಾಪ
ಆನಂದ ಚೋಪ್ರಾ ನಿಧನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸವದತ್ತಿ ನಾಡಿನ ಬಡವರ ಬಂಧು, ಸಮಾಜ ಸೇವಕ, ಧಾರ್ಮಿಕ ಹಿತಚಿಂತಕರಾದ ಆನಂದ ಎಸ್ ಚೋಪ್ರಾರವರ ನಿಧನದ ಸುದ್ದಿ ಅತ್ಯಂತ ಆಘಾತಕಾರಿ. ತಮ್ಮ ಜನಪರ ಸೇವೆಗಳಿಂದ ಸಾವಿರಾರು ಬಡ ಕುಟುಂಬಗಳಿಗೆ ಅವರ ಆಸರೆ ನಿಜಕ್ಕೂ ಶ್ಲಾಘನೀಯ, ಇಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದು ಸವದತ್ತಿ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ, ಬಂಧುಬಳಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.