
ಪ್ರಗತಿವಾಹಿನಿ ಸುದ್ದಿ, ಶಿರಸಿ – ಬೆಂಗಳೂರಿನ ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಂರ ಹೆಸರುಗಳನ್ನಿಡುವುದಕ್ಕೆ ಸಂಸದ, ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಸಮಾಜಸೇವಕರ ಹೆಸರಿಡಬೇಕೆನ್ನುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಈಗ ಸಮಾಜ ಸೇವಕರ ಹೆಸರಿನಲ್ಲಿ ಮುಸ್ಲಿಂರ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಒಂದು ಕೋಮಿನ ತುಷ್ಠೀಕರಣಕ್ಕೆ ಮುಂದಾಗಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು, ವೀರಸೈನಿಕರು, ರಾಷ್ಟ್ರ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಬಹುದು. ಆದರೆ ಮುಸ್ಲಿಂ ಹೆಸರನ್ನು ಇಡುವುದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಅನಂತಕುಮಾರ ಹೆಗಡೆ ತಿಳಿಸಿದ್ದಾರೆ.
ಒಂದೊಮ್ಮೆ ರಾಜ್ಯದ ಇತರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳೂ ಇದೇ ರೀತಿಯ ನಿರ್ಣಯ ತೆಗೆದುಕೊಂಡಲ್ಲಿ ಪರಿಸ್ಥಿತಿ ಊಹೆಗೂ ನಿಲುಕದಂತಿರುತ್ತದೆ. ಇದು ಕೋಮುಸಾಮರಸ್ಯ ಕೆಡುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಆಕ್ಷೇಪಿಸಿದ್ದಾರೆ.