Latest
*ಅನ್ನದಾನೇಶ್ವರ ಸ್ವಾಮೀಜಿ ಬರ್ಬರ ಹತ್ಯೆ; ಆತ್ಮಹತ್ಯೆಗೆ ಯತ್ನಿಸಿದ ಕೊಲೆ ಆರೋಪಿ*
![](https://pragativahini.com/wp-content/uploads/2024/06/IMG_20240610_142501_650_x_350_pixel.jpg)
ಪ್ರಗತಿವಾಹಿನಿ ಸುದ್ದಿ: ಅನ್ನದಾನೇಶ್ವರ ಮಠದ ಸ್ವಾಮೀಜಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ರವಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ 90 ವರ್ಷದ ಶಿವಾನಂದ ಸ್ವಾಮೀಜಿ ಅವರನ್ನು ನಿನ್ನೆ ಮಠದಲ್ಲಿಯೇ ಸ್ವಾಮೀಜಿ ಆಪ್ತಸಹಾಯಕ ರವಿ ಎಂಬಾತ ಹುಲ್ಲು ಕತ್ತರಿಸುವ ಆಯುಧದಿಂದ ಬರ್ಬರವಾಗಿ ಹತ್ಯೆಗೈದಿದ್ದ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ನಡುವೆ ಆರೋಪಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಆತನನ್ನು ಕೆ.ಆರ್.ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ರವಿ ಕುಡಿತದ ಚಟ ಹೊಂದಿದ್ದ. ಇದರಿಂದ ಸ್ವಾಮೀಜಿ ಆತನಿಗೆ ಬುದ್ಧಿವಾದ ಹೇಳಿದ್ದರು. ಅಲ್ಲದೇ ತನಗೆ ಕುಡಿಯಲು ಸ್ವಾಮೀಜಿ ಹಣ ನೀಡುತ್ತಿಲ್ಲ ಎಂದು ಶಿವಾನಂದ ಸ್ವಾಮೀಜಿಯನ್ನೇ ಆರೋಪಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.