Kannada NewsKarnataka NewsLatest

ಅಯೋಧ್ಯೆ ತೀರ್ಪು, ಈದ್ ಮಿಲಾದ್ ಹಿನ್ನೆಲೆ: ಶಾಂತಿ ಸಭೆ ನಡೆಸಿದ ಜಿಲ್ಲಾಡಳಿತ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಯಾವುದೇ ಕ್ಷಣದಲ್ಲಾದರೂ ಅಯೋಧ್ಯೆ ತೀರ್ಪು ಹೊರಬೀಳಲಿದೆ. ಆದ್ದರಿಂದ ತೀರ್ಪು ಪ್ರಕಟವಾಗುವ ವೇಳೆ ಯಾರೂ ಶಾಂತಿಗೆ ಭಂಗವುಂಟು ಮಾಡಬಾರದು. ನ್ಯಾಯಾಲಯ ಕೊಡುವಂತಹ ತೀರ್ಪು ನ್ಯಾಯದ ಪರವಾಗಿ ಇರುತ್ತದೆ. ಅದನ್ನು ಗೌರವಿಸುವ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮೆಲ್ಲರದೂ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ನ.೮) ನಡೆದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ನಾಡು ನಮ್ಮ ಬೆಳಗಾವಿ. ಈದ್ ಮಿಲಾದ್ ಸೇರಿದಂತೆ ಪ್ರತಿಯೊಂದು ಸಂದರ್ಭದಲ್ಲಿ ಶಾಂತಿಯನ್ನು ಕಾಪಾಡುವುದು ಎಲ್ಲ ನಾಗರಿಕರ ಜವಾಬ್ದಾರಿ ಎಂದು   ಅವರು ಹೇಳಿದರು.
ಸಮಾಜದಲ್ಲಿ ಶಾಂತತೆಯನ್ನು ಭಂಗ ಮಾಡುವ ಯಾವುದೇ ಕೃತ್ಯವನ್ನು ಎಸಗಬಾರದು ಮತ್ತು ಸುಳ್ಳು ಸುದ್ದಿಗೆ ಕಿವಿಗೊಟ್ಟು ಶಾಂತಿಗೆ ಭಂಗ ತರಬಾರದು ಎಂದು ಯುವಕರಿಗೆ ಡಾ. ಬೊಮ್ಮನಹಳ್ಳಿ ಅವರು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ಆಯುಕ್ತರಾದ ಲೋಕೇಶ ಕುಮಾರ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಬರುವ ಹಬ್ಬವನ್ನು ಶಾಂತತೆಯಿಂದ ಆಚರಿಸೋಣ. ಶಾಂತಿ, ಸುವ್ಯವಸ್ಥೆ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದರೆ ಬೆಳಗಾವಿ ನಗರಕ್ಕೆ ಉತ್ತಮ ಹೆಸರು ಬರುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಸುಳ್ಳು ಸುದ್ದಿ, ತಪ್ಪು ಸಂದೇಶ ಮತ್ತು ಮಾಹಿತಿಗಳಿಗೆ ಯುವಕರು ಕಿವಿಗೋಡಬೇಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿ.ಸಿ.ಪಿ ಯಶೋಧಾ ಒಂಟಗೋಡಿ, ಮಹಾನಗರ ಪಾಲಿಕೆಯ ಆಯುಕ್ತ  ಜಗದೀಶ ಎಚ್. ಕೆ ಹಾಗೂ ವಿವಿಧ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button