Kannada NewsKarnataka NewsLatest

ಬನವಾಸಿ ನೆಲದಲ್ಲಿ ನಿಂತು ಪಂಪ ಮಹಾಕವಿಯ “ಮನುಷ್ಯ ಜಾತಿ ತಾನೊಂದೆ ವಲಂ” ಮೌಲ್ಯವನ್ನು ಸ್ಮರಿಸಿದ ಸಿಎಂ

*ಬಸವಾದಿ ಶರಣರು, ಅಂಬೇಡ್ಕರ್, ಬುದ್ದ, ಗಾಂಧಿ ನಮ್ಮ ಸರ್ಕಾರದ ಮಾರ್ಗದರ್ಶಕರು: ಸಿ.ಎಂ.ಸಿದ್ದರಾಮಯ್ಯ ಬಣ್ಣನೆ*

*ನಾಡಿನ ಇಂದಿನ ಯುವ ಪೀಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ ಮತ್ತು ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕು* 

 *ಜಾತಿ, ಧರ್ಮದ ಭಾವನೆಗಳನ್ನು ಕೆಣಕಿ ರಾಜಕಾರಣ ಮಾಡಿದರೆ ನಿಮ್ಮ ಬದುಕು ಸುಧಾರಿಸುತ್ತದಾ? ನಾವು ಭಾವನೆ ಕೆಣಕಲ್ಲ-ಬದುಕನ್ನು ರೂಪಿಸುತ್ತೇವೆ* 

*ಐದು ವರ್ಷದಿಂದ ಬಿಲ ಸೇರಿದ್ದ ಅನಂತ್ ಕುಮಾರ್ ಹೆಗ್ಡೆ ಈಗ ಬಿಲದಿಂದ ಹೊರಗೆ ಬಂದು ವಿಕೃತವಾಗಿ ಮಾತನಾಡುತ್ತಾ ಅವರ ಸಂಸ್ಕೃತಿ ತೋರಿಸುತ್ತಿದ್ದಾರೆ*

*ದ್ವೇಷದ ಬೀಜ ಬಿತ್ತಿ ಮನುಷ್ಯರ ನಡುವೆ ವೈಷಮ್ಯ ಹರಡಿ ಸಮಾಜವನ್ನು ಛಿದ್ರಗೊಳಿಸುವವರ ಬಗ್ಗೆ ಎಚ್ಚರದಿಂದಿರಿ. ನಮ್ಮದು ಬಸವಾದಿ ಶರಣರ, ಸೂಫಿ-ಸಂತರ ನಾಡು: ಸಿ.ಎಂ.ಸಿದ್ದರಾಮಯ್ಯ ಕರೆ* 

ಪ್ರಗತಿವಾಹಿನಿ ಸುದ್ದಿ, ಬನವಾಸಿ : ದ್ವೇಷದ ಬೀಜ ಬಿತ್ತಿ ಮನುಷ್ಯರ ನಡುವೆ ವೈಷಮ್ಯ ಹರಡಿ ಸಮಾಜವನ್ನು ಛಿದ್ರಗೊಳಿಸುವವರ ಬಗ್ಗೆ ಎಚ್ಚರದಿಂದಿರಿ. ನಮ್ಮದು ಬಸವಾದಿ ಶರಣರ, ಸೂಫಿ-ಸಂತರ, ಬುದ್ದ, ಗಾಂಧಿಯ ನಾಡು ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಕರೆ ನೀಡಿದರು. 

ಬಸವಾಸಿಯ ಐತಿಹಾಸಿಕ ಕದಂಬೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

ಬನವಾಸಿ ನೆಲದಲ್ಲಿ ನಿಂತು ಮುಖ್ಯಮಂತ್ರಿಗಳು ಪಂಪ ಮಹಾಕವಿಯ “ಮನುಷ್ಯ ಜಾತಿ ತಾನೊಂದೆ ವಲಂ” ಮೌಲ್ಯವನ್ನು ಸ್ಮರಿಸಿ ಇದು ನಮ್ಮ ನಾಡಿನ ಸಂಸ್ಕೃತಿ, ಕನ್ನಡ ಸಂಸ್ಕೃತಿಯ ಚಾಲಕ ಶಕ್ತಿ ಎಂದು ವಿವರಿಸಿದರು. 

ಜಾತಿ, ಧರ್ಮದ ಭಾವನೆಗಳನ್ನು ಕೆಣಕಿ ರಾಜಕಾರಣ ಮಾಡಿದರೆ ನಿಮ್ಮ ಬದುಕು ಸುಧಾರಿಸುತ್ತದಾ? ನಾವು ನಿಮ್ಮ ನಂಬಿಕೆ ಮತ್ತು ಭಾವನೆಗಳನ್ನು ಕೆಣಕುವುದಿಲ್ಲ-ಆದರೆ ಜನರ ಬದುಕು ರೂಪಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇವ ನಾರವ ಎನ್ನದೆ, ಇವ ನಮ್ಮವ ಎನ್ನುವ ಮೌಲ್ಯದಲ್ಲಿ ಸರ್ಕಾರದ ಕಾರ್ಯಕ್ರಮ ರೂಪಿಸುತ್ತೇವೆ ಎಂದರು. 

ಇವತ್ತಿನ ಪಾರ್ಲಿಮೆಂಟು ಮತ್ತು ವಿಧಾನಸಭೆಯ ಮಾದರಿಯನ್ನು 12 ನೇ ಶತಮಾನದಲ್ಲೇ *ಅನುಭವ ಮಂಟಪ* ದ ಮೂಲಕ ವಿಶ್ವಕ್ಕೆ ಬಸವಾದಿ ಶರಣರು ನೀಡಿದ್ದಾರೆ ಎಂದರು. 

ನಾಡಿನ ಇಂದಿನ ಯುವ ಪೀಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ ಮತ್ತು ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಕನ್ನಡ ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಜತೆಗೆ ನಮ್ಮ ಚಾರಿತ್ರಿಕ ಜನ ಜೀವನ ಮತ್ತು ಸಮ ಸಮಾಜದ ಸಾಮಾಜಿಕ ವ್ಯವಸ್ಥೆಯನ್ನು ಅರಿತುಕೊಳ್ಳಲು ಸಾಧ್ಯ ಎಂದರು. 

ನಾವು ನುಡಿದಂತೆ ನಡೆದಿದ್ದೇವೆ. ಆ ಮೂಲಕ ಜನರ ಆಯ್ಕೆಗೆ, ಜನರ ಮತಕ್ಕೆ ಗೌರವ ಕೊಟ್ಟಿದ್ದೇವೆ. ನಮ್ಮ ಸರ್ಕಾರಕ್ಕೆ ನುಡಿದಂತೆ ನಡೆದ ಬಸವಾದಿ ಶರಣರು ಮತ್ತು ಅಂಬೇಡ್ಕರ್ , ಬುದ್ದ ಮತ್ತು ಮಹಾತ್ಮ ಗಾಂಧಿ ಮಾರ್ಗದರ್ಶಕರು. ಹೀಗಾಗಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ಕೊಟ್ಟ ಭರವಸೆಗಳಲ್ಲಿ ಶೇ 99 ರಷ್ಟನ್ನು ಜಾರಿ ಮಾಡಿದೆವು. 2023 ರಲ್ಲಿ ಗೆದ್ದ ಬಳಿಕವೂ ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಈಡೇರಿಸಿ ಎಂಟೇ ತಿಂಗಳಲ್ಲಿ ಐದೂ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ ಎಂದು ವಿವರಿಸಿದರು. 

ಅಧಿಕಾರ ಮತ್ತು ಸಮಾಜದ ಸಂಪತ್ತು ಕೆಲವರ ಕೈಯಲ್ಲೇ ಕೇಂದ್ರೀಕೃತ ಆಗಬಾರದು ಎನ್ನುವ ಎಲ್ಲಾ ಸಮಾಜ ಸುಧಾರಕರ ಆಶಯದಂತೆ ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿ ಅತ್ಯಂತ ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಇದಕ್ಕಾಗಿ 59000 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಗ್ಯಾರಂಟಿ ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 1,20,000 ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದರು. 

ನಮ್ಮ ಈ ಗ್ಯಾರಂಟಿಗಳನ್ನು ಅವಹೇಳನ ಮಾಡುತ್ತಿದ್ದ ಬಿಜೆಪಿಯವರೇ ಒಂದು ಕಡೆ ನಾಲ್ಕೂವರೆ ಕೋಟಿ ಕನ್ನಡ ನಾಡಿನ ಫಲಾನುಭವಿಗಳನ್ನು ಅವಮಾನಿಸುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ, ಮೋದಿ ಗ್ಯಾರಂಟಿ ಎಂದು ಹೆಸರಿಟ್ಟು ಪ್ರಚಾರ ಪಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

ಕೇಂದ್ರ ಸರ್ಕಾರ ರಾಜ್ಯಕ್ಕೆ, ರಾಜ್ಯದ ಜನರ ತೆರಿಗೆ ಹಣಕ್ಕೆ ಮಾಡುತ್ತಿರುವ ಅನ್ಯಾಯ, ವಂಚನೆಯನ್ನು ಪ್ರಶ್ನಿಸದ ಸಂಸದರು ಮತ್ತು ಬಿಜೆಪಿ ನಾಯಕರು 7 ಕೋಟಿ ಕನ್ನಡಿಗರ ವಿರೋಧಿಗಳು ಎಂದರು. 

ಐದು ವರ್ಷದಿಂದ ಬಿಲ ಸೇರಿದ್ದ ಅನಂತ್ ಕುಮಾರ್ ಹೆಗ್ಡೆ ಈಗ ಬಿಲದಿಂದ ಹೊರಗೆ ಬಂದು ವಿಕೃತವಾಗಿ ಮಾತನಾಡುತ್ತಾ ಅವರ ಸಂಸ್ಕೃತಿ ತೋರಿಸುತ್ತಿದ್ದಾರೆ. ಇವತ್ತಿನವರೆಗೂ ಸಂಸತ್ತಿನಲ್ಲಿ ಉತ್ತರ ಕನ್ನಡ ಜನತೆಯ ಪರವಾಗಿ, ರಾಜ್ಯದ ಪರವಾಗಿ ಒಂದೇ ಒಂದಿನ ಮಾತನಾಡಿಲ್ಲ ಎಂದರು. 

ಆದ್ದರಿಂದ ನಿಮ್ಮ ಭಾವನೆಗಳನ್ನು ಕೆರಳಿಸಿ ನಿಮ್ಮ ನಂಬಿಕೆಗಳ ಜತೆ ಚೆಲ್ಲಾಟ ಆಡುವವರನ್ನು ತಿರಸ್ಕರಿಸಿ, ನಿಮ್ಮ ಬದುಕಿನ ಪರವಾಗಿ ಇರುವವರನ್ನು ಬೆಂಬಲಿಸಿ ರಾಜಕೀಯ ಪ್ರಜ್ಞಾವಂತಿಕೆ ಪಾಲಿಸಿರಿ ಎಂದು ಕರೆ ನೀಡಿದರು. 

 ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಮಧುಕೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಹಿರಿಮೆಯನ್ನು ಕೇಳುತ್ತಾ ಇಡೀ ದೇವಸ್ಥಾನವನ್ನು ವೀಕ್ಷಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಶಿವರಾಂ ಹೆಬ್ಬಾಳ್, ಶಾಸಕರಾದ ಭೀಮಣ್ಣ ನಾಯಕ್, ಸತೀಶ್ ಸೈಲ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

*ಉತ್ತರ ಕನ್ನಡ ಜಿಲ್ಲೆಯ ಜನತೆಯ ಖಾತೆಗೆ (ಜೇಬಿಗೆ) ಇದುವರೆಗೂ ಹಾಕಿರುವ ಗ್ಯಾರಂಟಿ ಹಣದ ವಿವರ*

ಶಕ್ತಿ ಯೋಜನೆಯಿಂದ 94.57 ಕೋಟಿ, ಗೃಹ ಲಕ್ಷ್ಮಿ ಯೋಜನೆಯಿಂದಾಗಿ 394.4 ಕೋಟಿ, ಅನ್ನಭಾಗ್ಯ ಯೋಜನೆಯಡಿ 112.04 ಕೋಟಿ, ಗೃಹ ಜ್ಯೋತಿ ಯೋಜನೆಯಡಿ 100.30 ಕೋಟಿ ಹಣವನ್ನು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ನೇರವಾಗಿ ನೀಡಲಾಗಿದೆ.

Related Articles

Back to top button