Kannada NewsKarnataka NewsLatestPolitics

*ಲೋಕಸಭಾ ಚುನಾವಣೆ ನಂತರ ದೇಶದಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ: ಬೊಮ್ಮಾಯಿ ಭವಿಷ್ಯ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಮುಗಿದ ಮೂರು ತಿಂಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ಎರಡು ಹೋಳಾಗುತ್ತದೆ. ಅದರ ಪರಿಣಾಮ ಕರ್ನಾಟಕದ ಮೇಲೆ ಆಗಲಿದ್ದು, ಕಾಂಗ್ರೆಸ್ ನಲ್ಲಿನ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರ ಬಹಳ ದಿನ ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಕುಮಾರ ಉದಾಸಿಯವರು ಈ ಕ್ಷೇತ್ರದಲ್ಲಿ ಸಾಕಷ್ಡು ಅಭಿವೃದ್ಧಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮೋದಿಯವರು ಮೂರನೇ ಬಾರಿ ಪ್ರಧಾನಿಯಾದ ನಂತರ ನೂರಕ್ಕೆ ನೂರು ಕೇಂದ್ರದ ಎಲ್ಲ ಯೋಜನೆಗಳನ್ನು ಈ ಕ್ಷೇತ್ರದಲ್ಲಿ ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರಿಂದ ಅಭೂತಪೂರ್ವವಾದ ಬೆಂಬಲ ದೊರೆಯುತ್ತಿದೆ. ವಿಶೇಷ ವಾಗಿ ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಉತ್ಸಾಹದಿಂದ ಚುನಾವಣೆ ಮಾಡುವ ನಿರ್ಧಾರ ಮಾಡಿದ್ದಾರೆ.


ಕೆ ಎಸ್ ಈಶ್ವರಪ್ಪ ಅವರು ಹಿರಿಯರಿದ್ದಾರೆ ಪಕ್ಷ ಕಟ್ಟುವಲ್ಲಿ ಅವರ ಪಾತ್ರ ದೊಡ್ಡದಿದೆ. ಪಕ್ಷದ ಮುಖಂಡರು ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಸಮಯವಿದೆ. ಅವರು ಪಕ್ಷದ ತೀರ್ಮಾನವನ್ನು ಒಪ್ಪುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.


ಹಾವೇರಿ ಕ್ಷೇತ್ರದಲ್ಲಿ ತಾವು ಮನಸಿಲ್ಲದೇ ಸ್ಪರ್ಧೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧೆ ಮಾಡುವಂತೆ ವರಿಷ್ಠರು ಸೂಚನೆ ಕೊಟ್ಟಾಗ ಇಲ್ಲಿ ನನ್ನ ಮನಸ್ಸಿನ ಪ್ರಶ್ನೆ ಬರುವುದಿಲ್ಲ. ವರಿಷ್ಠರ ಸೂಚನೆ ಪಾಲಿಸುವುದು ನನ್ನ ಕರ್ತವ್ಯ. ಅದಕ್ಕಾಗಿ ಕರ್ತವ್ಯ ಪಾಲಿಸುತ್ತಿದ್ದೇನೆ. ಎಲ್ಲಿ ಗೆಲ್ಲುವ ವಿಶ್ವಾಸ ಇರುತ್ತದೆ ಅಲ್ಲಿ ಪೈಪೋಟಿ ಇರುತ್ತದೆ. ಕಾಂಗ್ರೆಸ್ ಗೆ ಗೆಲ್ಲುವ ವಿಶ್ವಾಸ ಇಲ್ಲ ಹೀಗಾಗಿ ಅಲ್ಲಿ ಬಂಡಾಯದ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.


ಪ್ರತಿಸ್ಪರ್ಧಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ಪ್ರತಿಸ್ಪರ್ಧಿಯನ್ನು ಗೌರವಿಸುತ್ತೇನೆ. ಅವರನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಗದಗ ಜಿಲ್ಲೆಯಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲ ಮುಖಂಡರು ನನ್ನ ಜೊತೆಗಿದ್ದಾರೆ ಎಂದು ಹೇಳಿದರು.

Related Articles

Back to top button