*ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ರೈತರ ಚಳವಳಿ ಎದುರಿಸಬೇಕಾಗುತ್ತದೆ: ಬೊಮ್ಮಾಯಿ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಹಾನಿಯಾಗಿರುವ ರೈತರ ಬೆಳೆಗೆ ಬೆಂಬಲ ಬೆಲೆ ನೀಡಿ ಸೂಕ್ತ ಪರಿಹಾರ ನೀಡದಿದ್ದರೆ, ರಾಜ್ಯ ಸರ್ಕಾರ ದೊಡ್ಡ ಪ್ರಮಾಣದ ರೈತರ ಚಳವಳಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ರಾಜ್ಯಾದ್ಯಂತ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಅಗಿ ಎರಡು ತಿಂಗಳು ಕಳೆದರೂ ಕೂಡ ರಾಜ್ಯ ಸರ್ಕಾರ ಪರಿಹಾರ ಕೊಡಲು ಮುಂದೆ ಬಂದಿಲ್ಲ. ಸರ್ವೆ ಕಾರ್ಯ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ರೈತರ ಬಾಳು ಕಂಗೆಟ್ಟಿದೆ ಪರಿಹಾರಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಸರ್ಕಾರದ ಕಡೆ ನೋಡುತ್ತಿದ್ದಾರೆ. ಕಳೆದ ವರ್ಷವೂ ಯಾವುದೇ ಪರಿಹಾರ ನೀಡಿಲ್ಲ ಕೆಂದ್ರದ ಪರಿಹಾರ ಕೊಟ್ಟು ಕೈ ತೊಳೆದುಕೊಂಡರು. ಈ ವರ್ಷ ಮೊತ್ತ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ರೈತರ ಬಗ್ಗೆ ಅಸಡ್ಡೆ ತೋರಿಸುತ್ತಿದೆ. ಎಲ್ಲ ರೈತರಿಗೂ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದ್ದಾರೆ.
ಗೋವಿನ ಜೋಳ, ಸೋಯಾ, ಹೆಸರು ಎಲ್ಲ ಬೆಲೆ ಕುಸಿದಿದೆ ಅದಕ್ಕೆ ಬೆಂಬಲ ಬೆಲೆ ದರದಲ್ಲಿ ಗೋವಿನ ಜೋಳ ಸೋಯಾ ಖರೀದಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಗೋವಿನ ಜೋಳದ ಬೆಲೆ 2500 ಇದ್ದ ದರ 1500 ರೂ. ಗೆ ಇಳಿದಿದೆ ಕೂಡಲೆ ಬೆಂಬಲ ಬೆಲೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನ್ಯಾಯ ಸಮ್ಮತ ಬೆಲೆ
ರಾಜ್ಯದ ಕಬ್ಬು ಬೆಳೆಗಾರ ರೈತರು ನ್ಯಾಯ ಸಮ್ಮತ ಬೆಲೆ ಘೊಷಣೆಗೆ ಸಕ್ಕರೆ ಕಾರ್ಖಾನೆಯಿಂದ ಬಯಸಿ ಬಾಗಲಕೋಟೆ ಬೆಳಗಾವಿ, ಬಿಜಾಪುರದ ರೈತರು ಧರಣಿ ಮಾಡುತ್ತಿದ್ದು ಕಾರ್ಖಾನೆಯವರು ಸ್ಮಂದಿಸುತ್ತಿಲ್ಲ. ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಿ ರೈತರು ಬೇಡಿರುವ 3500 ರೂ. ದರ ನಿಗದಿ ಮಾಡಿ ಕಾರ್ಖಾನೆಗಳಿಂದ ಘೊಷಣೆ ಮಾಡಿ ಕಬ್ಬು ಅರಗಿಸುವ ಕೆಲಸ ಆರಂಬಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೇಲೆ ಕಾಣಿಸಿದ ಮೂರು ಕ್ರಮ ಕೈಗೊಳ್ಳದಿದ್ದರೆ ರೈತರು ಸಂಕಷ್ಟಕ್ಕೆ ಈಡಾಗುತ್ತಾರೆ. ರೈತರ ಪರ ಸರ್ಕಾರ ಎಂದು ಹೇಳಿ ಏನೂ ಮಾಡದಿದ್ದರೆ ದೊಡ್ಡ ಪ್ರಮಾಣದ ರೈತರ ಚಳುವಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
 
					 
				 
					 
					 
					 
					
 
					 
					 
					


