Kannada NewsLatest

ಮಹಿಳೆಯರು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು – ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಿಳಾ ಸಮಾಖ್ಯ ಕರ್ನಾಟಕದ ಸ್ತ್ರೀಪಥ ಮಹಿಳಾ ಸಮ್ಮೇಳನವನ್ನು, ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ನಮ್ಮ ಇಲಾಖೆಯಡಿ ಮಹಿಳಾ ಸಮಾಖ್ಯದ ಮೂಲಕ ಬೆಳಗಾವಿ, ಗದಗ, ಯಾದಗಿರಿ ವಿಭಾಗವಾರು ಮಹಿಳೆಯರ ಸಬಲೀಕರಣಕ್ಕಾಗಿ 2 ದಿನ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮ ಇದಾಗಿದೆ. 1986 ರ ಶಿಕ್ಷಣ ನೀತಿಯಲ್ಲಿ ರೂಪಿತ ಮಹಿಳಾ ಸಬಲೀಕರಣ ಹಾಗೂ ಸಮಾನತೆಯ ಉದ್ದೇಶದಿಂದ ಮಾನವ ಸಂಪನ್ಮೂಲ ಸಚಿವಾಲಯದಿಂದ ಜಾರಿಯಾದ ಕಾರ್ಯಕ್ರಮ ‘ಮಹಿಳಾ ಸಾಮಖ್ಯ’. 1989 ರಲ್ಲಿ ಕರ್ನಾಟಕದ 18 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. 2016-17 ನೇ ಸಾಲಿನಿಂದ ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀ ಶಕ್ತಿ ಯೋಜನೆಯಡಿಯಲ್ಲಿ 9 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಿ, ಮಹಿಳಾ ಕಾನೂನು ಮತ್ತು ಆರ್ಥಿಕ ಸದೃಢತೆಗೆ ಒತ್ತು ನೀಡಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಬಲರಾಗಬೇಕು. ಶಿಕ್ಷಣದ ಮೂಲಕ ಸಮಾನತೆಯನ್ನು ತರುವ ಮುಖಾಂತರ ಮಹಿಳೆಯರಲ್ಲಿ ನಾಯಕತ್ವದ ಗುಣ ಹಾಗೂ ಅವರು ಸಮಾಜದಲ್ಲಿ ಸ್ವಾವಲಂಬಿಗಳನ್ನಾಗಿ, ನಿರ್ಣಯಗಳನ್ನು ತೆಗೆದುಕೊಳ್ಳುವಷ್ಟು ಸಕ್ಷಮರನ್ನಾಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

Home add -Advt

ಸಮಾರಂಭದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮಹಿಳಾ ಸಮಾಖ್ಯ ಕರ್ನಾಟಕ ನಿರ್ದೇಶಕರಾದ ಮಂಜುಳಾ ವ್ಹಿ, ಸಿಡಿಪಿಓ ಸುಮಿತ್ರಾ ಡಿ.ಬಿ , ನಿಪ್ಪಾಣಿ ಪಿ.ಎಸ್.ಐ ಅನೀತಾ ರಾಠೋಡ, ನಿಪ್ಪಾಣಿ ತಾ. ಪಂ ಅಧ್ಯಕ್ಷರಾದ ಅನುರಾಧಾ ಚೌಗಲೆ, ಉಪಾಧ್ಯಕ್ಷರಾದ ಅನಿತಾ ದೇಸಾಯಿ, ನಗರಸಭೆ ಸದಸ್ಯರು, ಹಾಗೂ ಮಹಿಳಾ ಮೋರ್ಚಾ ಸದಸ್ಯರು ಉಪಸ್ಥಿತರಿದ್ದರು.

Related Articles

Back to top button