Kannada NewsLatest

ಚುನಾವಣೆ ದೃಷ್ಟಿಯಿಂದ ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ಬಿಳುತ್ತದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಆರೋಪಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ನಿಮಿತ್ತ ನಗರದಲ್ಲಿ ಹಿಲ್ಸ್ ಗಾರ್ಡನ್‌ ದಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾಂತರ ಸಮಾವೇಶದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಜನಪ್ರಿಯತೆ ಕುಸಿದಿರುವ ಬಗ್ಗೆ ತಿಳಿದು ಈ ಕಾಯ್ದೆಗಳನ್ನು ರದ್ದುಪಡಿಸಿದರೂ ಮತ್ತೆ ಕುತಂತ್ರದಿಂದ ಕಾಯ್ದೆ ಜಾರಿಮಾಡಬಹುದು. ಹೀಗಾಗಿ ಎಚ್ಚರದಿಂದ ಇರಬೇಕೆಂದರು.

Home add -Advt

ಪ್ರಸ್ತುತ ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮ, ಪತ್ರಿಕೆಗಳನ್ನು ಸೂಕ್ಷ್ಮತೆಯಿಂದ ಗಮನಿಸಬೇಕು. ನಮ್ಮ ಹೋರಾಟಗಳು ಇತರರಿಗೆ ಪ್ರೇರಣೆಯಾಗಬೇಕೆಂದು ಕರೆ ನೀಡಿದ ಅವರು, ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸೂಚಿಸಿದರು.

ಮುಸ್ಲಿಂ ಬಾಂಧವರನ್ನು ಕೆರಳಿಸುವ ಕೆಲಸ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು, ಅದಕ್ಕೆ ಸ್ಪಂದಿಸದೇ ಪರಿಶೀಲನೆ ನಡೆಸಬೇಕು. ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಸಮಯ ವ್ಯರ್ಥ ಮಾಡದೇ, ಆರ್ಥಿಕ ಪ್ರಗತಿ ಸಾಧಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಬಿಜೆಪಿ ಶ್ರೀಮಂತರ ಪರ ಕೆಲಸ ಮಾಡುತ್ತಿದೆ. ಹಿಂದುಳಿದವರು, ಅಲ್ಪಸಂಖ್ಯಾಂತರು ಬಿಜೆಪಿ ಪಕ್ಷದ ಕುತಂತ್ರಕ್ಕೆ ಬಲಿಯಾಗಬೇಡಿ, ಈ ಬಗ್ಗೆ ಮೂರು, ನಾಲ್ಕು ದಿನ ತರಬೇತಿ ನೀಡಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಧರ್ಮ ಇದ್ದರೆ ಮಾತ್ರ ದೇಶ ಎನ್ನುವ ವಾತಾವರಣ ಇಂದು ನಾವು ದೇಶದಲ್ಲಿ ಕಾಣುತ್ತಿದ್ದು, ಇದೊಂದು ಅಪಾಯಕಾರಿ ಬೆಳವಣಿಗೆ. ಹೀಗಾಗಿ ಈ ಬೆಳವಣಿಗೆ ತಡೆಯಲು ಕಾಂಗ್ರೆಸ್‌ ಪಕ್ಷ ಬೆಂಬಲಿಸಬೇಕೆಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿ ಆರ್ಥಿಕ ಸಭಲತೆ ಕಾಣಬೇಕೆಂಬ ಉದ್ದೇಶ ಕಾಂಗ್ರೆಸ್‌ ಪಕ್ಷ ಹೊಂದಿದ್ದು, ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಪಣತೊಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಯುವ ನಾಯಕ ರಾಹುಲ್‌ ಜಾರಕಿಹೊಳಿ, ಕಲ್ಪನಾ ಜೋಶಿ, ನಜೀರ್‌ ಶೇಖ್‌, ತನ್ವೀರ್‌ ಶೇಮಶೆರ್‌, ಅಮೀದ್‌ ನಾಡವಾಲೆ, ಇಮರಾನ್‌ ತಫಕಿರ್‌, ಮುಂಜುರ್‌ ಶಮ್ಮಶೇರ್, ಶಬ್ಭೀರ್‌ ಮುಜಾವರ್‌, ಮೋಸಿನ್‌ ಖೋಜಾ, ತೌಫೀಕ್‌ ಮುಲ್ಲಾ, ತಬಸುಮ್‌ ಮುಲ್ಲಾ, ನಶೀಮಾ ಬುಡ್ಡನ್ನವರ್‌, ಎಚ್.ಡಿ.ಮುಲ್ಲಾ, ಇಬ್ರಾನ್‌ ಶೇಖ್‌, ತಾಹೀರ್‌ ಫೀರ್ಜಾದೆ, ಆರೀಫ್‌ ಫೀರ್ಜಾದೆ, ಪ್ರಕೃತಿ ದೊಡಮನಿ ಸೇರಿದಂತೆ ಅಲ್ಪಸಂಖ್ಯಾಂತರ ಸಮಾಜದ ಹಲವು ಮುಖಂಡರು ಇದ್ದರು.
ಟೋಯಿಂಗ್: CM ತೀವ್ರ ಅಸಮಾಧಾನ; ನಾಳೆಯೇ ಉನ್ನತಾಧಿಕಾರಿಗಳ ಸಭೆ

Related Articles

Back to top button