Belagavi NewsBelgaum NewsKannada NewsKarnataka News

*ಬೆಳಗಾವಿ ಗೆಲವು ಕಾರ್ಯಕರ್ತರಿಗೆ ಸಲ್ಲುತ್ತದೆ : ಕವಟಗಿಮಠ*; *ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಒಳ ಒಪ್ಪಂದ ಮಾಡಿಕೊಂಡಿಲ್ಲ‌‌*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಪಕ್ಷದ ಕಾರ್ಯಕರ್ತರೇ ಕಾರಣ. ಗೆಲುವಿನ ಸಂಪೂರ್ಣ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯಾ ಕ್ಷೇತ್ರಗಳ ಮುಖಂಡರ ಜೊತೆಗೆ ಕಾರ್ಯಕರ್ತರು ಸಂಘಟಿತ ಕೆಲಸ ಮಾಡಿದ್ದರಿಂದ ಗೆಲುವು ಬಂದಿದೆ ಎಂದು ತಿಳಿಸಿದರು.

ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲ, ಉತ್ತರದಲ್ಲಿ ಅನಿಲ ಬೆನಕೆ, ರವಿ ಪಾಟೀಲ, ಗ್ರಾಮೀಣದಲ್ಲಿ ಎಂಇಎಸ್ ಮುಖಂಡರು ಮತ್ತು ಮಾಜಿ ಶಾಸಕ ಸಂಜಯ ಪಾಟೀಲ, ಬೈಲಹೊಂಗಲದಲ್ಲಿ ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ ಮತ್ತು ಶಂಕರ ಮಾಡಲಗಿ, ಸವದತ್ತಿಯಲ್ಲಿ ವಿಶ್ವನಾಥ ಮಾಮನಿ, ರತ್ನಾ ಮಾಮನಿ, ಪಂಚನಗೌಡ, ಸೌರಬ್ ಛೋಪ್ರಾ, ರಾಮದುರ್ಗದಲ್ಲಿ ಮಹಾದೇವಪ್ಪ ಯಾದವಾಡ, ಚಿಕ್ಕನಗೌಡ, ಗೋಕಾಕದಲ್ಲಿ ರಮೇಶ ಜಾರಕಿಹೊಳಿ, ಅರಬಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಗೆಲುವು ಸಾಧ್ಯವಾಗಿದೆ. ಇವರ ಜೊತೆಗೆ ಜಿಲ್ಲೆಯ ಎಲ್ಲ ಪ್ರಮುಖ ಪದಾಧಿಕಾರಿಗಳು ಕೆಲಸ ಮಾಡಿದ್ದಾರೆ. ನಾನು ಜಗದೀಶ್ ಶೆಟ್ಟರ್ ನಮ್ಮ ಮನೆಗೆ ಭೇಟಿ ನೀಡಿದಾಗಿನಿಂದ ಅವರು ಗೆದ್ದು ವಾಪಸ್ ಹೊಗುವವರೆಗೂ ಅವರ ಜೊತೆಗಿದ್ದೆ ಎಂದು ಕವಟಗಿಮಠ ವಿವರಿಸಿದರು.
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿಲ್ಲ‌‌. ಬೆಳಗಾವಿಯಲ್ಲಿ ಬಿಜೆಪಿ ಸಂಘಟಿತ ಹೋರಾಟ ಮಾಡಿತ್ತು. ಚಿಕ್ಕೋಡಿಯಲ್ಲಿ ಸೋಲಲು ಕಾರಣ ಏನು ಎನ್ನುವ ಕುರಿತು ಆತ್ಮಾವಲೋಕನ ಮಾಡಲಾಗುವುದು. ನಾನು ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಕಳೆದ 3 ವರ್ಷದಿಂದ ಓಡಾಡಿದ್ದರಿಂದ ಇಲ್ಲಿಯೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆ. ಆದಾಗ್ಯೂ ಚಿಕ್ಕೋಡಿಯಲ್ಲಿ 3 ದಿನ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಎಂಇಎಸ್ ನಾಯಕರು ಸಹ ಬಹಿರಂಗವಾಗಿ ರಾಷ್ಟ್ರೀಯತೆಯ ಆಧಾರದ ಮೇಲೆ ಬಿಜೆಪಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ 50 ಸಾವಿರ ಲೀಡ್ ಪಡೆದು ಬಿಜೆಪಿ ಗೆದ್ದು ಬರಲು ಕಾರಣವಾಯಿತು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಆಗಿದ್ದ ಗೊಂದಲಗಳನ್ನು ಈ ಬಾರಿ ಸರಿಪಡಿಸಿಕೊಂಡು ಕೆಲಸ ಮಾಡಿದ್ದೇವೆ. ಈ ಬಾರಿ ಅಭ್ಯರ್ಥಿ ಘೋಷಣೆ ತಡವಾಗಿದ್ದರಿಂದ ಲೀಡ್ ಸ್ವಲ್ಪ ಕಡಿಮೆಯಾಗಿದೆ ಎಂದು ಕವಟಗಿಮಠ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button