*ಭೀಮಾತೀರದಲ್ಲಿ ಮತ್ತೆ ಫೈರಿಂಗ್: 6 ಜನರ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ: ಭೀಮಾತೀರದಲ್ಲಿ 6 ಜನರ ಹತ್ಯೆ ಮಾಡಿದ್ದ ಹಂತಕನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದೆ.
ಮುಖ್ಯ ಆರೋಪಿ ಮಹೇಶ್ ತಳವಾರ್ ಮೇಲೆ ಫೈರಿಂಗ್ ನಡೆದಿದೆ. ಕಾಲಿಗೆ ಗುಂಡು ಹಾರಿಸಿ ಚಡಚಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಮಹೇಶ್ ಕಾಲಿಗೆ ಫೈರಿಂಗ್ ಮಾಡಲಾಗಿದೆ.
ಮಹೇಶನನ್ನ ಬಂಧಿಸಲು ಹೋದಾಗ ಓಡಿ ಹೋಗಲು ಯತ್ನಿಸಿದ್ದ ಅಲ್ಲದೇ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಮೇಲೆ ಕೂಡ ದಾಳಿಗೆ ಯತ್ನಿಸಿದ್ದಾನೆ. ಆಗ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೆ ಮಹೇಶ್ ಇದಕ್ಕೆ ಕಿವಿಗೊಡದೇ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಮಹೇಶ್ ಬಂಧಿಸಿದ್ದಾರೆ.
ಮಹೇಶ್ ಬಲಗಾಲಿಗೆ ಚಡಚಣ ಸಿಪಿಐ ಪರಶುರಾಮ್ ಮನಗೂಳಿ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಮಹೇಶ್ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇ 29 ರಂದು ಭೀಮಾತೀರದ ಗೋವಿಂದಪುರ ಗ್ರಾಮ ಜಮೀನಿನಲ್ಲಿ ಚಡಚಣದ ನಿರಾಳೆ ಕುಟುಂಬ 5 ಜನ ಹಾಗೂ ಇನ್ನೋರ್ವ ಸೇರಿ 6 ಜನರ ಭೀಕರ ಹತ್ಯೆ ನಡೆದಿತ್ತು. ಕೊಲೆಗೆ ಆರೋಪಿ ಮಹೇಶ್ ಹಾಗೂ ಗ್ಯಾಂಗ್ 15 ಲಕ್ಷಕ್ಕೆ ಸುಪಾರಿ ಪಡೆದಿತ್ತು. 6 ಜನರ ಸಾಮೂಹಿಕ ಹತ್ಯೆಗೆ ಮಹೇಶ್ ತಳವಾರ್ ಹುಡುಗರನ್ನ ಸೇರಿಸಿದ್ದ. ಕಳೆದ 23 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದ ಮಹೇಶ್ ಈಗ ಬಲೆಗೆ ಬಿದ್ದಿದ್ದಾನೆ.




