
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿರಂತರ ಶಿವನ ಭಕ್ತಿಯಲ್ಲಿ ಬದುಕು ಕಳೆದ ಶರಣೆ ಹೇಮರಡ್ಡಿ ಮಲ್ಲಮ್ಮನವರು ತೋರಿಸಿದ ದಾರಿಯಿಂದ ಜೀವನಕ್ಕೆ ಮುಕ್ತಿ ದೊರಕಲಿದೆ ಎಂದು ಸಾಹಿತಿಗಳಾದ ಗುರುದೇವಿ ಹುಲೆಪ್ಪನವರಮಠ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ(ಮೇ.10) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕುಟುಂಬದೊಂದಿಗೆ ಹೇಗೆ ಜೀವನ ನಡೆಸಬೇಕು ಎಂಬುದನ್ನು ತಿಳಿಸಿಕೊಟ್ಟು ಸಾಮಾನ್ಯ ಜನರಿಗೆ ಮಾದರಿಯಾದಂತಹ ಮಹಾನ್ ಶರಣೆ. ಪರಮ ಪತಿವ್ರತೆ, ಕಿರಿಟದಲ್ಲಿ ರತ್ನಗಳ ಹಾಗೆ ಹೊಳೆಯುವಂತಹ ಗುಣ ಹೊಂದಿದವಳು ತಾಯಿ ಹೇಮರೆಡ್ಡಿ ಮಲ್ಲಮ್ಮನವರು. ಭಾರತದ ಸಂಸ್ಕೃತಿ ಮುಡಿಗೆ ಹೂವನ್ನು ಇಟ್ಟಂತಹ ಶರಣರು ಯಾರಾದರು ಇದ್ದರೆ ಅದು ತಾಯಿ ಮಲ್ಲಮ್ಮ ನವರು ಎಂದು ತಿಳಿಸಿದರು.
ಪರೋಪಕಾರ, ದಾನ-ಧರ್ಮಗಳನ್ನು ಮಾಡಿ ಎಲ್ಲ ಜನರಿಗೆ ಸಹಾಯ ಮಾಡಿ, ಮಾದರಿ ಆದವರು ಮಲ್ಲಮ್ಮನವರದು. ಜೀವನದಲ್ಲಿ ತಾಳ್ಮೆಯಿಂದ ಬದುಕಿದರೆ ಎಲ್ಲ ಸಾಧಿಸಲು ಸಾದ್ಯ ಎಂದು ತಿಳಿಸಿಕೊಟ್ಟಂತಹ ಮಹಾನ್ ಶರಣೆ. ಮೈದುನ ವೇಮನರನ್ನು ಮಹಾನ್ ಯೋಗಿಯಾಗಿ ಪರಿವರ್ತನೆ ಮಾಡಿದಂತಹ ಶ್ರೇಯ ಶರಣೆ ಮಲ್ಲಮ್ಮನವರದು ಎಂದು ಗುರುದೇವಿ ಹುಲ್ಲೆಪ್ಪನವರಮಠ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಸಂಘದ ಅಧ್ಯಕ್ಷರಾದ ಮಂಜುನಾಥ ಪಾಟೀಲ, ಸಮಾಜದ ಮುಖಂಡರಾದ ರಾಮಣ್ಣ ಮುನ್ನೊಳ್ಳಿ, ಅನಂತ ಬ್ಯಾಕೋಡ, ಮುಸ್ತಾಕ ಮುಲ್ಲಾ, ಪ್ರಕಾಶ ಕಕರಡ್ಡಿ, ಬಾಬು ಕಾತರಕಿ, ಕಸ್ತೂರಿ ಭರಮನಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.