ಬಿಜೆಪಿ ಭರವಸೆಯ ಸರಕಾರ, ಈಡೇರಿಸುವ ಸರಕಾರವಲ್ಲ ಎನ್ನುವುದು ಸಾಬೀತು – ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರದ ಬಿಜೆಪಿ ಸರಕಾರ ಮಂಡಿಸಿರುವ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು, ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಮತ್ತು ವೇತನದಾರರಿಗೆ ಯಾವುದೇ ಕೊಡುಗೆ ನೀಡದೆ ಮೋಸಮಾಡಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿದ್ದಾರೆ.

ತೆರಿಗೆ ವಿನಾಯಿತಿ ಅಥವಾ ಬೆಲೆ ಇಳಿಕೆಗೆ ಕ್ರಮ ತೆಗೆದುಕೊಳ್ಳುವ ಮೂಲಕ ಕೇಂದ್ರ ಸರಕಾರ ಜನಸಾಮಾನ್ಯರಿಗೆ ಮತ್ತು ವೇತನದಾರರಿಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಹ ಯಾವುದೇ ಕೊಡುಗೆ ನೀಡಿಲ್ಲ. ಬದಲಾಗಿ ಸೀಮೆ ಎಣ್ಣೆ ಮತ್ತು ಸಿಲಿಂಡರ್ ಸಹಾಯಧನದಲ್ಲಿ ಭಾರೀ ಪ್ರಮಾಣದಲ್ಲಿ ಅನುದಾನ ಕಡಿತ ಮಾಡುವ ಮೂಲಕ ದೊಡ್ಡ ಬರೆ ಎಳೆದಿದೆ. ಸಹಜವಾಗಿ ಇವುಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Home add -Advt

ಕರ್ನಾಟಕದ ಪಾಲಿಗಂತೂ ಸರಕಾರ ಏನನ್ನೂ ನೀಡಿಲ್ಲ. ಜಿಎಸ್ಟಿ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಅಂದಾಗ ಕೋವಿಡ್ ನಂತರ ಸಂಕಷ್ಟದ ಸಂದರ್ಭದಲ್ಲಿ ಆದಾಯ ತೆರಿಗೆ ಮಿತಿ ಏರಿಕೆ ಮಾಡುವ ಮೂಲಕ ನೆರವಿಗೆ ಬರಬಹುದಿತ್ತು. ಕೋವಿಡ್ ಇನ್ಸೂರೆನ್ಸ್ ಜಾರಿಮಾಡುವ ಮೂಲಕವಾದರೂ ಸಹಾಯ ಮಾಡಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡದೆ ಬಜೆಟ್ ಯಾವ ನಿರೀಕ್ಷೆಯನ್ನೂ ಈಡೇರಿಸದೆ ನಿರಾಸೆಯನ್ನುಂಟು ಮಾಡಿದೆ. ಬಿಜೆಪಿ ಕೇವಲ ಭರವಸೆಗಳ ಸರಕಾರವೇ ಹೊರತು ಈಡೇರಿಸುವ ಸರಕಾರವಲ್ಲ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದರ ದರ ಏರಿಕೆ? ಯಾವುದು ಇಳಿಕೆ?

Related Articles

Back to top button