Kannada NewsKarnataka NewsLatest
ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ : ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅತಿವೃಷ್ಠಿಯಿಂದ ಕುಸಿದ ಮನೆಯನ್ನು ಪರಿಹಾರಕ್ಕಾಗಿ ‘ಬಿ’ ಕೆಟೆಗರಿ ಸೇರಿಸಲು ಸಂತ್ರಸ್ಥನಿಂದ ಲಂಚ ಕೇಳಿದ ಮೂಡಲಗಿ ತಾಲೂಕು ಮಸಗುಪ್ಪಿಯ ಗ್ರಾಮ ಲೆಕ್ಕಾಧಿಕಾರಿಯನ್ನು, ರೂ.15,000 ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ.
ಅಶೋಕ ತಳವಾರ ಬಂಧಿತ ಆರೋಪಿ. ಮಸಗುಪ್ಪಿಯ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಅಶೋಕ ತಳವಾರ ಮೂಡಲಗಿಯ ತಹಶೀಲದಾರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಅತಿವೃಷ್ಠಿಗೆ ಕುಸಿದ ಮನೆಯ ವಿವರಗಳನ್ನು ಪರಿಹಾರಕ್ಕಾಗಿ ‘ಬಿ’ ಕೆಟೆಗರಿಗೆ ಸೇರಿಸಲು ಅರಭಾವಿ ತೋಟದ ನಿವಾಸಿ ಪ್ರವಾಹ ಸಂತ್ರಸ್ಥ ಆನಂದ ಧರ್ಮಟ್ಟಿ ಎಂಬಾತನಿಂದ ರೂ.30 ಸಾವಿರ ಲಂಚದ ಬೇಡಿಕೆ ಇಟ್ಟಿದ್ದನು. ಈ ಕುರಿತಂತೆ ಸಂತ್ರಸ್ಥ ವ್ಯಕ್ತಿಯು ಎಸಿಬಿಯಲ್ಲಿ ದೂರು ದಾಖಲಿಸಿದ್ದನು.ಸಂತ್ರಸ್ಥನಿಂದ ರೂ.15 ಸಾವಿರ ಸ್ವೀಕರಿಸುವಾಗ ಎಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಎಸಿಬಿ ಎಸ್ಪಿ ಬಿ.ಎಸ್.ನೇಮಗೌಡರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವೇಣುಗೋಪಾಲ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಗಳಾದ ಎ.ಎಸ್.ಗುದಿಗೊಪ್ಪ, ಸುನಿಲಕುಮಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.




