ಇಂದು ದೆಹಲಿಗೆ ಹೋಗಲಿರುವ ಬಿಎಸ್ ವೈ: 3 ಪ್ರಮುಖ ಕಾರಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ನವದೆಹಲಿಗೆ ತೆರಳಲಿದ್ದಾರೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಅವರು ದೆಹಲಿ ವಿಮಾನವೇರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಹೈಕಮಾಂಡ್ ಜೊತೆ ಚರ್ಚಿಸಲು ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ ಎಂದು ಗೊತ್ತಾಗಿದೆ. ಆದರೆ ನಿಖರ ಕಾರಣವನ್ನು ಹೈಕಮಾಂಡ್ ಆಗಲಿ, ಯಡಿಯೂರಪ್ಪ ಅವರಾಗಲಿ ಬಹಿರಂಗಪಡಿಸಿಲ್ಲ.

ಮಾಹಿತಿಯ ಪ್ರಕಾರ ಯಡಿಯೂರಪ್ಪ 3 ಕಾರಣಕ್ಕಾಗಿ ದೆಹಲಿಗೆ ತೆರಳುತ್ತಿದ್ದಾರೆ. ಮೊದಲನೆಯದು ರಾಜ್ಯದ ಕೆಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಿ ಮತ್ತು ಕೆಲವು ಕೇಂದ್ರ ಸಚಿವರೊಂದಿಗೆ ಚರ್ಚಿಸಿ, ಅನುಮೋದನೆ ಪಡೆಯಬೇಕಿದೆ.

ಇದಾದ ನಂತರ  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಎದ್ದಿರುವ ಕೋಗು ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ಮುಂದಿನ ದಾರಿ ಕುರಿತು ಹೈಕಮಾಂಡ್ ಸಲಹೆ ಪಡೆಯಲಿದ್ದಾರೆ.

ಮೂರನೇಯದಾಗಿ, ರಾಜ್ಯದಲ್ಲಿ ಸಚಿವಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ಹೈಕಮಾಂಡ್ ಜೊತೆಗೆ ಯಡಿಯೂರಪ್ಪ ಚರ್ಚಿಸಲಿದ್ದಾರೆ. ಪದೆ ಪದೆ ಕಿರಿಕಿರಿ ಮಾಡುವ ಮತ್ತು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಸಚಿವರನ್ನು ಕೈಬಿಡುವ ಕುರಿತು ಸಹ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.

ನಾಯಕತ್ವ ಬದಲಾವಣೆ ಸಂಬಂಧ ಯಡಿಯೂರಪ್ಪ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸುತ್ತಿದೆ ಎನ್ನುವ ಸುದ್ದಿ ಹರಡಿದೆ. ಆದರೆ ಈ ಹಂತದಲ್ಲಿ ಅಂತಹ ಬದಲಾವಣೆ ಸಾಧ್ಯತೆ ತೀರಾ ಕಡಿಮೆ. ಮೂಲಗಳ ಪ್ರಕಾರ ಯಡಿಯೂರಪ್ಪ ಅವರೇ ಹೈಕಮಾಂಡ್ ಮತ್ತು ಪ್ರಧಾನಿಗಳ ಭೇಟಿಗೆ ಸಮಯ ಕೇಳಿ ಪಡೆದುಕೊಂಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿಯಾದ ಎಂ.ಬಿ.ಪಾಟೀಲ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button