Latest

*ಚಿತ್ರಕಲಾ ಪರಿಷತ್ತು ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು: ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿತ್ರಕಲಾ ಪರಿಷತ್ತು ಅತ್ಯಂತ ವಿಶಿಷ್ಟ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋದಲ್ಲಿ ಆಯೋಜಿಸಿರುವ 20 ನೇ ಚಿತ್ರಸಂತೆಯನ್ನು ಉದ್ಘಾಟಿಸಿ ಮಾತನಾಡಿದರು.

ಎನ್.ಎಸ್.ಡಿ ದೆಹಲಿಯಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಪಡೆದಿದೆ. ಬೆಂಗಳೂರಿಗೆ ಸೀಮಿತವಾಗದೆ ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಕಟ್ಟಲು ಅಗತ್ಯ ನೆರವು, ಸಹಕಾರ ನೀಡಲಾಗುವುದು. ಬ್ರಾಂಡ್ ಬೆಂಗಳೂರನ್ನು ರಾಷ್ಟಮಟ್ಟಕ್ಕೆ ಕೊಂಡೊಯ್ಯಬಲ್ಲ ಸಂಸ್ಥೆಗಳಲ್ಲಿ ಚಿತ್ರಕಲಾ ಪರಿಷತ್ ಕೂಡ ಒಂದು. ಐಐಟಿ, ಐಐಎಂ, ಎನ್.ಎಸ್.ಎಲ್.ಯು ಮಟ್ಟಕ್ಕೆ ಬೆಳೆಯಬೇಕು ಎಂದರು.

ಚಿತ್ರಸಂತೆ ಚಿತ್ರಕಲೆಯ ಪರಮಹಂಸ
ಚಿತ್ರಕಲೆಯಿಂದ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವಾಗುತ್ತಿದೆ. ಈ ರೀತಿಯ ಕೆಲಸ ಬೇರೆಲ್ಲೂ ಆಗುತ್ತಿಲ್ಲ.
ಪರಿಷತ್ತಿಗೆ ಈಗ ರೆಕ್ಕೆಗಳು ಬಂದಿವೆ. ಸರಸ್ವತಿಯ ವಾಹನ ಪರಮಹಂಸದಂತೆ ಚಿತ್ರಸಂತೆ ಚಿತ್ರಕಲೆಯ ಪರಮಹಂಸ. ಇದು ಬೆಳೆದಿದ್ದು, ಗಟ್ಟಿಮುಟ್ಟಾದ ರೆಕ್ಕೆಗಳು ಮೂಡಿವೆ. ಇನ್ನೂ ಎತ್ತರಕ್ಕೆ ಹಾರಬೇಕು ಎನ್ನುವುದು ನನ್ನ ಉದ್ದೇಶ. ಹಿಮಾಲಯದ ಎತ್ತರಕ್ಕೆ ಹಾರಬೇಕು ಎಂದರು.

ಪ್ರಾದೇಶಿಕ ಕೇಂದ್ರಗಳಲ್ಲಿ ಚಿತ್ರಸಂತೆಗಳಾಗಬೇಕು
ಬೆಂಗಳೂರಿಗೆ ಸೀಮಿತವಾಗಿರದೆ, ಕಲ್ಯಾಣ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಕಲಾವಿದರಿದ್ದಾರೆ. ಅವರಿಗೆ ಯಾವುದೇ ವೇದಿಕೆ ಇಲ್ಲ. ಈ ವರ್ಷ ನಾಲ್ಕೈದು ಚಿತ್ರಸಂತೆಗಳನ್ನು ಪ್ರಾದೇಶಿಕ ಕೇಂದ್ರಗಳಾದ, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡಗಳಲ್ಲಿ ಏರ್ಪಡಿಸಬೇಕು. ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದರು. ಬೆಂಗಳೂರು ನಾನಾ ರೀತಿಯಲ್ಲಿ ವಿಶಿಷ್ಟ ನಗರ. ಪ್ರಾಚೀನ, ಮಹಾರಾಜರ, ತಂತ್ರಜ್ಞಾನ, ಐ.ಟಿ ಬಿಟಿ, ಹೊಸ ವಿಜ್ಞಾನ, ಸ್ಟಾರ್ಟ್ ಅಪ್ ಗಳ ತವರು ಬೆಂಗಳೂರು. ಅದರೊಂದಿಗೆ ಉತ್ತಮವಾದ ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ಬೀಡಾಗಿದೆ. ಇಸ್ಕಾನ್, ಆರ್ಟ್ ಆಫ್ ಲಿವಿಂಗ್, ಈಶಾ ಆಧ್ಯಾತ್ಮಿಕ ಕೇಂದ್ರಗಳುನಿಲ್ಲಿ ನೆಲೆಯಾಗಿವೆ. ಇವೆಲ್ಲವನ್ನೂ ಬಿಂಬಿಸುವ ಕೆಲಸವಾಗಬೇಕು ಎಂದರು.

ಚಿತ್ರಸಂತೆಯನ್ನು ಎರಡು ದಿನ ಆಯೋಜಿಸಿ
ಎನ್.ಜಿ.ಈ.ಎಫ್ ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಂಗಳೂರಿನಲ್ಲಿ ಬೆಳೆದ ಬಗೆಯನ್ನು ಬಿಂಬಿಸುವ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಅಂತೆಯೇ ವಿಭಿನ್ನವಾದ ಕಲೆಗಳು ಹೇಗೆ ಅಭಿವೃದ್ಧಿಯಾಗಿವೆ ಎಂದು ಬಿಂಬಿಸಲು ಸ್ಥಳ ಸೇರಿಸಂತೆ ಅನುಕೂಲ ನೀಡಲಾಗುವುದು . ಮುಂದಿನ ವರ್ಷ 2 ದಿನ ಚಿತ್ರ ಸಂತೆ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಲ್ಲರೂ ಚಿತ್ರಕಲೆಯನ್ನು ಖರೀದಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದರು.

ಪರಿಷತ್ತಿನಂಥ ಸಂಸ್ಥೆ ಇಡೀ ದೇಶದಲ್ಲಿ ಮತ್ತೊಂದಿಲ್ಲ
ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಮೆದುಳಿನ ಯೋಚನೆ ಹಾಗೂ ಹೃದಯಾಂತರಾಳದ ಭಾವನೆಗಳಿವೆ. ಯೋಚನೆಗಳಿಗೆ ತಂತ್ರಜ್ಞಾನದಂಥ ಹಲವಾರು ಮಾಧ್ಯಮಗಳಿವೆ. ಆದರೆ ಚಿತ್ರಕಲೆಗೆ ಯಾವುದೇ ತಂತ್ರಜ್ಞಾನ ಬೇಕಿಲ್ಲ. ಕಲೆಯನ್ನು ಉತ್ತಮಗೊಳಿಸಲು ಬಳಕೆಯಾಗಬಹುದು. ಮನದಾಳದ ಭಾವನೆಗಳು ಚಿತ್ರಕಲೆಯ ಮೂಲಕ ತಿಳಿಯುತ್ತದೆ. ಹಾಗಾಗಿ ಚಿತ್ರಕಲೆಗೆ ವಿಶ್ವದಲ್ಲಿ ಬಹಳಷ್ಟು ಬೆಲೆಯಿದೆ. ಚಿತ್ರಕಲೆ ಎಂದರೆ ವಜ್ರವಿದ್ದಂತೆ. ತಿಳಿಯದಿದ್ದವರಿಗೆ ಅದೊಂದು ಕಲ್ಲು. ತಿಳಿದವರು ಅದರ ಮೌಲ್ಯ ಗೊತ್ತಿರುತ್ತದೆ. ಚಿತ್ರಕಲೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಹೆಚ್ಚು ಸಾರ್ವಜನಿಕರು ಮಾಡಿದರೆ ಹೆಚ್ಚು ಉಪಯುಕ್ತವಾಗುತ್ತದೆ. ಅಂಥ ಸಮಾಜದ ಚಿಂತನೆಯನ್ನು ನಿರ್ಮಿಸುವ ಕೆಲಸವನ್ನು ಮಾಡುವ ಕೇಂದ್ರ ಚಿತ್ರಕಲಾ ಪರಿಷತ್ತು. ಚಿತ್ರಕಲಾ ಪರಿಷತ್ತು ಕಲಾವಿದರಿಗೆ ವೇದಿಕೆ ನೀಡಿ ಅವರ ಕಲೆಯನ್ನು ಅಭಿವ್ಯಕ್ತ ಮಾಡಲು ಶಿಸ್ತುಬದ್ಧವಾದ ವ್ಯವಸ್ಥೆ ಹಾಗೂ ಸಾಮಾನ್ಯ ಜನರಲ್ಲಿ ಈ ಬಗ್ಗೆ ಆಸಕ್ತಿ ಹಾಗೂ ಭಾವನೆಗಳನ್ನು ತಿಳಿದುಕೊಳ್ಳುವ ವಿಧಾನ ಎರಡನ್ನೂ ಮಾಡುವ ಪ್ರಮುಖ ಕೆಲಸ. ಚಿತ್ರಕಲಾ ಪರಿಷತ್ತಿನಂಥ ಸಂಸ್ಥೆ ಇಡೀ ದೇಶದಲ್ಲಿ ಮತ್ತೊಂದಿಲ್ಲ ಎನ್ನುವುದು ನಮಗೆ ಹೆಮ್ಮೆ ಎಂದರು.

ಉಲ್ಲಾಸ ನೀಡುವ ವಾತಾವರಣ
ಕಷ್ಟದ ಕೆಲಸವಾದರೂ ಚಿತ್ರಸಂತೆ ಮೂಲಕ ಜನಸಾಮಾನ್ಯರನ್ನು ಚಿತ್ರಕಲೆಗೆ ಎಳೆದುತರಲಾಗಿದೆ. ಅವರನ್ನು ಆಕರ್ಷಿಸಿ, ಚಿತ್ರಕಲೆಯನ್ನು ಕೊಂಡು ಮನೆಗೆ ಹೋದಾಗ ಅದರ ಬಗ್ಗೆ ಚರ್ಚೆ, ವಿಮರ್ಶೆಯಾಗಿ ಕಲೆ ಬೆಳೆಯಲು ಅವಕಾಶವಾಗುತ್ತದೆ. ಚಿತ್ರಸಂತೆ ಅವಶ್ಯಕ, ಆಗಲೇಬೇಕಾದ ಸಂತೆ. ಮನಸ್ಸಿಗೆ ಸಂತೋಷ ಉಲ್ಲಾಸ ನೀಡುವ ಒಂದು ವಾತಾವರಣ ಕಲ್ಪಿಸುತ್ತದೆ ಎಂದರು.

ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್, ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ ನಾರಾಯಣ್, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರ ಕಲಾವಿದ ಲಕ್ಷ್ಮಣ ಗೌಡ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*ಗೃಹ ಸಚಿವರ ಮನೆಯಲ್ಲಿ ಸ್ಯಾಂಟ್ರೋ ರವಿಯಿಂದ ಕಂತೆ ಕಂತೆ ಹಣ ಎಣಿಕೆ; ಹೊಸ ಬಾಂಬ್ ಸಿಡಿಸಿದ HDK*

https://pragati.taskdun.com/h-d-kumaraswamysantro-raviaraga-jnanendra/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button