
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಾಂಗ್ರೆಸ್ ನಲ್ಲಿ ಯಾವುದೇ ಬಣ ರಾಜಕೀಯವೂ ಇಲ್ಲ, ಗುಂಪುಗಾರಿಕೆಯೂ ಇಲ್ಲ. ನಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ ಹೊರತು ಸಿಎಂ ಸ್ಥಾನದ ಬಗ್ಗೆ ಚರ್ಚಿಸಲು ಇದು ಸಮಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸದ್ಯಕ್ಕೆ ಸಿಎಂ ಹುದ್ದೆಯೇ ಖಾಲಿಯಿಲ್ಲ. ಖಾಲಿಯಿಲ್ಲದಿರುವ ಹುದ್ದೆಗೆ ನಾವ್ಯಾಕೆ ಪೈಪೋಟಿ ಮಾಡಬೇಕು ಎಂದರು.
ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಡಿಕೆಶಿ, ಬಿಜೆಪಿಯಲ್ಲಿ ಬ್ಲ್ಯಾಕ್ ಮೇಲ್ ರಾಜಕಾರಣ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿದ್ದಾರೆ. ಅವರ ವಿರುದ್ಧ ರೇಪ್ ಕೇಸ್ ದಾಖಲಾದರೂ ಬಂಧಿಸದೇ ರಾಜ್ಯ ಸರ್ಕಾರ ಸುಮ್ಮನಿರುವುದು ಯಾಕೆ? ಸರ್ಕಾರದಿಂದಲೇ ಆರೋಪಿ ರಕ್ಷಣೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತಮಿಳುನಾಡು ಮಾಜಿ ಸಚಿವ ಮಣಿಕಂಠನ್ ವಿರುದ್ಧ ಅತ್ಯಾಚಾರ ದೂರು ದಾಖಲಾಗಿತ್ತು. ಮಣಿಕಂಠನ್ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಇನ್ನೂ ರಮೇಶ್ ಜಾರಕಿಹೊಳಿಯನ್ನು ಬಂಧಿಸಿಲ್ಲ. ಕರ್ನಾಟಕ ಪೊಲೀಸರಿಗೆ ಕಳಂಕ ಬಂದಂತಾಗಿದೆ. ರಾಜ್ಯ ಸರ್ಕಾರ ಆರೋಪಿ ಪರ ನಿಂತಿರುವುದಾದರೂ ಯಾಕೆ ಎಂದು ಪ್ರಶ್ನಿಸಿದರು.
ಇದು ರಾಜಕೀಯ ಮಾಡುವ ಸಮಯವಲ್ಲ; ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದ ಬಿ.ಸಿ.ಪಾಟೀಲ್
ಬುಧವಾರ ರಮೇಶ ಜಾರಕಿಹೊಳಿ ರಾಜಿನಾಮೆ?; 20 ಸಾವಿರ ಕೋಟಿ ರೂ. ವಿವಾದದ ಸುತ್ತ….