Kannada NewsKarnataka NewsLatest

ಮೂಡಲಗಿಯಲ್ಲಿ ಹೈಟೆಕ್ ಬಸ್ ಡಿಪೋ ನಿರ್ಮಾಣ: ಬಾಲಚಂದ್ರ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಮೂಡಲಗಿ ಹೊಸ ತಾಲೂಕಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಗತ್ಯವಿರುವ ಎಲ್ಲ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೇ ವಾ.ಕ.ರ.ಸಾ.ಸಂಸ್ಥೆಯ ಮೂಡಲಗಿ ಬಸ್ ಘಟಕ ನಿರ್ಮಾಣಕ್ಕೆ ಮೂರು ಎಕರೆ ನಿವೇಶನವನ್ನು ನೀಡಲಾಗುವುದು ಎಂದು ಶಾಸಕ ಮತ್ತು ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಕುಲಗೋಡ ಗ್ರಾಮದಲ್ಲಿ ಪ್ರಾದೇಶಿಕ ಹಿಂದುಳಿದ ಪ್ರದೇಶಾಭಿವೃದ್ದಿ ಇಲಾಖೆಯಿಂದ (ನಂಜುಂಡಪ್ಪ ಆಯೋಗ) ೯೫ ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ ಪಟ್ಟಣದಲ್ಲಿ ಮೂರು ಎಕರೆ ನಿವೇಶನದಲ್ಲಿ ಹೈಟೆಕ್ ಬಸ್ ಘಟಕವನ್ನು ನಿರ್ಮಾಣ ಮಾಡಲಾಗುವುದು. ಈ ಘಟಕ ನಿರ್ಮಾಣಕ್ಕೆ ಈಗಾಗಲೇ ನಿವೇಶನವನ್ನು ಸಹ ಗುರುತಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್-೧೯ ಹಿನ್ನೆಲೆಯಲ್ಲಿ ಸಾರಿಗೆ ನಿಗಮ ಈಗಷ್ಟೇ ಆರ್ಥಿಕವಾಗಿ ಚೇತರಿಕೆಯನ್ನು ಕಾಣುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ರದ್ದು ಮಾಡಿದ್ದರಿಂದ ಸಂಸ್ಥೆಗೆ ಸಾಕಷ್ಟು ಹಾನಿಯಾಗಿದೆ. ಪ್ರತಿ ಗ್ರಾಮಗಳಿಗೂ ಸಂಸ್ಥೆಯು ತನ್ನ ಲಾಭ-ನಷ್ಟದ ಬಗ್ಗೆ ಯೋಚಿಸದೇ ಬಸ್‌ಗಳನ್ನು ಆರಂಭಿಸಿದೆ ಎಂದು ಹೇಳಿದರು.
ಮೂಡಲಗಿ ತಾಲೂಕಿನಲ್ಲಿ ಹೋಬಳಿ ರಚನೆ ಪ್ರಕ್ರೀಯೇ ಈಗಾಗಲೇ ನಡೆದಿದೆ. ಕುಲಗೋಡ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ರಚಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಯಲ್ಲಿ ೪-೫ ಗ್ರಾಮಸ್ಥರು ಸಹ ತಮ್ಮ ಗ್ರಾಮಗಳನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ನಾಗರೀಕರಿಗೆ ಬಂದು ಹೋಗಲು ಅನುಕೂಲವಾಗುವಂತೆ ಕೇಂದ್ರ ಸ್ಥಳವನ್ನು ಗುರುತಿಸಿ ಹೊಸ ಹೋಬಳಿ ರಚಿಸಲಾಗುವುದು ಎಂದು ಶಾಸಕರು ಹೇಳಿದರು.

ಜಿಆರ್‌ಬಿಸಿ ಕಾಲುವೆಗಳ ಆಧುನಿಕರಣ: ಹಿಡಕಲ್ ಜಲಾಶಯದಿಂದ ಟೆಲ್ ಎಂಡ್ ಎಲ್ಲ ರೈತರಿಗೆ ಕಾಲುವೆಗಳ ನೀರು ದೊರೆಯುವಂತೆ ಮಾಡಲು ಘಟಪ್ರಭಾ ಬಲದಂಡೆ ಕಾಲುವೆಯನ್ನು ಪುನರ್‌ನಿರ್ಮಾಣ ಮಾಡಲಾಗುವುದು. ಈಗಾಗಲೇ ಇದರ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾಮಗಾರಿ ಆಧುನಿಕರಣದಿಂದ ಹಿಡಕಲ್ ಜಲಾಶಯದಿಂದ ಬಾಗಲಕೋಟ ಜಿಲ್ಲೆಯ ಎಲ್ಲ ರೈತರಿಗೂ ಕಾಲುವೆ ನೀರು ಸಿಗಲಿದೆ. ೦ದಿಂದ ೧೯೯ ಕಿಮೀ ವರೆಗಿನ ಕಾಲುವೆಯ ಪುನರ್ ನಿರ್ಮಾಣ ಕಾಮಗಾರಿಗಾಗಿ ಅಂದಾಜು ೧೫೦೦ ಕೋಟಿ ರೂ.ಗಳ ಪ್ರಸ್ತಾವಣೆಯನ್ನು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗುವುದು. ಈ ಕಾಮಗಾರಿಯ ದುರಸ್ತಿಯಿಂದಾಗಿ ಟೆಲ್‌ಎಂಡ್‌ನ ರೈತರ ೧.೫೦ ಲಕ್ಷ ಹೆಕ್ಟರ್ ಜಮೀನುಗಳು ನೀರಾವರಿ ಕ್ಷೇತ್ರವಾಗಲಿದೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ರಸ್ತೆ ನಿರ್ಮಾಣಕ್ಕೆ ೧೪ ಕೋಟಿ: ಹದಗೆಟ್ಟಿರುವ ಕುಲಗೋಡ-ಯಾದವಾಡ ರಸ್ತೆ ಕಾಮಗಾರಿಗೆ ೧೪ಕೋಟಿ ರೂ.ಗಳ ಮಂಜೂರಾತಿ ದೊರೆತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆಯನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ ಇದರಿಂದ ಸಾರ್ವಜನಿಕ ಸುಗಮ ಸಂಚಾರಕ್ಕಾಗಿ ಅನುಕೂಲವಾಗಲಿದೆ. ಸಮಗ್ರ ಪ್ರಗತಿಯೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಗೋಕಾಕ ಟಿಎಪಿಸಿಎಮ್‌ಎಸ್ ಅಧ್ಯಕ್ಷ ಅಶೋಕ ನಾಯಿಕ, ಯಾದವಾಡ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಜಿ.ಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಎಪಿಎಮ್‌ಸಿ ಮಾಜಿ ಅಧ್ಯಕ್ಷ ಅಜಪ್ಪ ಗಿರಡ್ಡಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಬಸನಗೌಡ ಪಾಟೀಲ, ಶಕುಂತಲಾ ಚಿಪ್ಪಲಕಟ್ಟಿ, ತಾ.ಪಂ ಮಾಜಿ ಸದಸ್ಯ ಸುಭಾಶ ವಂಟಗೋಡಿ, ನ್ಯಾಯವಾದಿ ಪ್ರಶಾಂತ ವಂಟಗೋಡಿ, ತಾ.ಪಂ ಸದಸ್ಯ ಸದಾಶಿವ ದುರಗನ್ನವರ, ಪಿಕೆಪಿಎಸ್ ಅಧ್ಯಕ್ಷ ವೆಂಕಣ್ಣ ಚನ್ನಾಳ, ತಮ್ಮಣ್ಣ ದೇವರ, ಪುಟ್ಟಣ್ಣ ಪೂಜೇರಿ, ಸಾರಿಗೆ ಅಧಿಕಾರಿಗಳಾದ ಆರ್.ಪಿ.ವಾಜಂತ್ರಿ, ಪ್ರಭು ಮಡಿವಾಳರ, ಸೋಮಲಿಂಗ ಮಿಕಲಿ, ಗಿರೀಶ ಹಳ್ಳೂರ, ಈರಣ್ಣ ಜ್ಯಾಲಿಬೇರಿ, ಮಹಾದೇವ ನಾಡಗೌಡ, ಹಣಮಂತ ಉಪ್ಪಾರ, ಗಿರೀಶ ನಾಡಗೌಡ, ಅಶೋಕ ಹಿರೇಮೇತ್ರಿ, ರಾಜು ಯಕ್ಸಂಬಿ, ಸಂಗಪ್ಪ ಕಂಟಿಕಾರ, ಆದಮ್ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button