Kannada NewsKarnataka NewsLatest

*ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ*

ಪ್ರಗತಿವಾಹಿನಿ ಸುದ್ದಿ : ಶೌಚಕ್ಕೆ ನದಿ ದಡಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆ  ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕುಳಗಿ ರಸ್ತೆಯಲ್ಲಿ ನಡೆದಿದೆ.

ಕುಳಗಿ ನಿವಾಸಿ ಆನಂದ ಮಣ್ಣವಡ್ಡರ (42) ಎಂಬುವವರೇ ಮೊಸಳೆ ದಾಳಿಗೆ ಒಳಗಾದ ದುರ್ದೈವಿ. ಕುಳಗಿ ರಸ್ತೆಯ ಕಾಳಿ ನದಿ ದಡದಲ್ಲಿ ಆನಂದ ಅವರು ಇಂದು ಶೌಚಕ್ಕೆಂದು ಕುಳಿತಿದ್ದಾಗ, ನದಿಯಿಂದ ಏಕಾಏಕಿ ಬಂದ ಮೊಸಳೆ ಅವರ ಮೇಲೆರಗಿದೆ. ಮೊಸಳೆಯ ಅನಿರೀಕ್ಷಿತ ದಾಳಿಯಿಂದ ಕಂಗಾಲಾದ ಆನಂದ ಅವರು ಜೀವ ಭಯದಿಂದ ಜೋರಾಗಿ ಕಿರುಚಾಡಿದ್ದಾರೆ.

ಆನಂದ ಅವರ ಕಿರುಚಾಟ ಕೇಳಿದ ಕೂಡಲೇ ಹತ್ತಿರದಲ್ಲಿದ್ದ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ತಕ್ಷಣವೇ ಮೊಸಳೆಯನ್ನು ಓಡಿಸುವಲ್ಲಿ ಯಶಸ್ವಿಯಾದ ಕಾರಣ ಆನಂದ ಅವರು ದೊಡ್ಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಮೊಸಳೆಯ ದಾಳಿಯಿಂದಾಗಿ ಅವರ ದೇಹದ ಹಲವು ಭಾಗಗಳಿಗೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಗಾಯಾಳುವನ್ನು ದಾಂಡೇಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

Home add -Advt

ಈ ಘಟನೆ ಕುಳಗಿ ಭಾಗದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಗಳು ಸಮರ್ಪಕವಾಗಿ ನಿರ್ವಹಣೆಯಾಗದೆ ಹಾಳಾಗಿವೆ. ಇದರಿಂದಾಗಿ ಗ್ರಾಮಸ್ಥರು ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಕಾಳಿ ನದಿಯ ದಡಕ್ಕೆ ಹೋಗುತ್ತಿದ್ದಾರೆ.

Related Articles

Back to top button