
ಕೊಯಮತ್ತೂರು: ಕೊಯಮತ್ತೂರಿನಲ್ಲಿ ರೈಲು ಡಿಕ್ಕಿ ಹೊಡೆದು ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಬುಧವಾರ ರಾತ್ರಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ರೈಲ್ವೆ ಹಳಿಗಳ ಮೇಲೆ ಕೂತಿದ್ದಾಗ ಈ ಘಟನೆ ನಡೆದಿದೆ..
ವಿದ್ಯಾರ್ಥಿಗಳು ರೈಲ್ವೆ ಹಳಿ ಮೇಲೆ ಕೂತಿದ್ದ ಸಮಯದಲ್ಲಿ, ವೇಗದ ಚೆನ್ನೈ-ಆಲಪ್ಪುಳ ಎಕ್ಸ್ಪ್ರೆಸ್ ರೈಲು ಅವರ ಮೇಲೆ ಹರಿದಿದೆ. ರೈಲಿನ ವೇಗಕ್ಕೆ ಸ್ಥಳದಲ್ಲೇ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಕೊಯಮತ್ತೂರು ಬಳಿಯ ಸುಲೂರ್ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳದಲ್ಲಿ ದೊರೆತ ಮದ್ಯದ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಕಪ್ಗಳ ಆಧಾರದ ಮೇಲೆ, ಅವರು ಮದ್ಯ ಸೇವಿಸಲು ಹಳಿಗಳ ಮೇಲೆ ಕೂತಿದ್ದರು ಎಂದು ವರದಿಯಾಗಿದೆ.
ಮೃತರನ್ನು ಸಿದ್ದೀಕ್ ರಾಜ (22), ರಾಜಶೇಖರ್ (20), ಗೌತಮ್ (23) ಮತ್ತು ಕರುಪ್ಪಸಾಮಿ (24) ಎಂದು ಗುರುತಿಸಲಾಗಿದೆ. ಅವರೊಂದಿಗೆ ಇದ್ದ ವಿಗ್ನೇಶ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.