Karnataka NewsLatestPolitics

*ಸಮಾನತೆ ಮತ್ತು ಭ್ರಾತೃತ್ವ ನಮ್ಮ ಜೀವನದ ಭಾಗವಾಗಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಮಾನವೀಯತೆಯಿಂದ ಬದುಕುವ ಜೊತೆಗೆ ಸಮಾನತೆ ಮತ್ತು ಭ್ರಾತೃತ್ವ ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಅವರು ಇಂದು ಬೆಂಗಳೂರಿನ ಎಂ ಜಿ ರೈಲ್ವೆ ಕಾಲೋನಿಯ ಅಮಲೋದ್ಭವ ಮಾತೆಯ ದೇವಾಲಯ (Immaculate Conception Church) 125 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Home add -Advt

ವಿವಿಧ ಧರ್ಮಗಳ ಆಚರಣೆಗಳು ಭಕ್ತಿಯ ಮನೋಭಾವದಿಂದ ಜನರ ಶಾಂತಿನೆಮ್ಮದಿಗಾಗಿ ಹಾಗೂ ಸಮಾಜ ಸೇವೆ ಮತ್ತು ಆತ್ಮಶುದ್ಧಿಗಾಗಿ ಆಚರಿಸಲಾಗುತ್ತದೆ. “ಧರ್ಮಗಳು ಹಲವಾದರೂ, ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು ಎಂಬುದರಲ್ಲಿ ನಂಬಿಕೆಯಿರಿಸಿದವನು ನಾನು”, ಎಂದರು.
ಹಿಂದೂ ಧರ್ಮದಲ್ಲಿ ದೀಪಬೆಳಗಿದರೆ, ಕ್ರೈಸ್ತ ಧರ್ಮದಲ್ಲಿ ಮೊಂಬತ್ತಿಯನ್ನು ಬೆಳಗುತ್ತಾರೆ. ಕ್ರೈಸ್ತ ಧರ್ಮ, ಹಿಂದೂ ಧರ್ಮ ಸೇರಿದಂತೆ ವಿವಿಧ ಧರ್ಮಗಳು ತನ್ನದೇ ಆದ ಆಚರಣೆಗಳನ್ನು, ಪೂಜಾವಿಧಾನಗಳನ್ನು ಹೊಂದಿವೆ. ಈ ಚರ್ಚ್ ನಲ್ಲಿರುವಂತೆಯೇ ಹಿಂದೂ ದೇವಾಲಯಗಳಲ್ಲಿ ಧ್ವಜಸ್ತಂಭವಿರುತ್ತದೆ. ಈ ಕಾರ್ಯಕ್ರಮದಲ್ಲಿ ನುಡಿಸಲಾದ ವಾದನದಲ್ಲಿ ಸುಮಧುರ ನಾದ ಹೊಮ್ಮಿದೆ. ಅಂತೆಯೇ ಬಿದಿರಿನ ಕೊಳಲು ವಾದನದಿಂದ ಸುಮಧುರ ನಾದ ಹೊಮ್ಮುತ್ತದೆ. ಅಂತೆಯೇ ಭಗವಾನ್ ಕೃಷ್ಣನ ಶಂಖನಾದಕ್ಕೆ ತನ್ನದೇ ಆದ ಮಹತ್ವವಿದೆ ಎಂದರು.

ಮಾನವೀಯತೇ ಪರಮ ಧರ್ಮ ಎಂದು ಭಾವಿಸಿ
ಪ್ರಕೃತಿಯ ನಿಯಮದ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ನಾವು ಯಾವ ಧರ್ಮ ಜಾತಿಯಲ್ಲಿ ಜನಿಸುತ್ತೇವೆ ಎಂದು ಯಾರು ತಿಳಿದಿರುವುದಿಲ್ಲ. ಯಾವುದೇ ಧರ್ಮ ಇತರೆ ಧರ್ಮದವರಿಗೆ ತೊಂದರೆ ಕೊಡುವುದನ್ನು ಬೋಧಿಸುವುದಿಲ್ಲ. ಕ್ರಿಶ್ಚಿಯನ್ ಧರ್ಮವನ್ನು ಟೀಕಿಸುವವರು, ನಿಮ್ಮದೇ ಧರ್ಮದ ಆಸ್ಪತ್ರೆಗಳು, ಶಾಲಾಕಾಲೇಜುಗಳ ಒಲವು ತೋರುತ್ತಾರೆ. ಟೀಕಿಸುವ ಜನರಿಗೆ ಲಾಭ ದೊರೆಯುವಾಗ ಯಾವ ಧರ್ಮವೂ ಅಡ್ಡಿ ಬರುವುದಿಲ್ಲ. ಮಾನವೀಯತೇ ಪರಮ ಧರ್ಮ ಎಂದು ಭಾವಿಸಿ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುವುದು ಅಗತ್ಯ ಎಂದರು.

ಮಾನವೀಯ ಗುಣ ಪರಿಗಣಿಸಿ ನಿರ್ಧಾರ
ಈ ಹಿಂದೆ ಸುಮನಹಳ್ಳಿ ಕುಷ್ಟರೋಗ ಪುನರ್ವಸತಿ ಕೇಂದ್ರಕ್ಕೆ 50 ಎಕರೆ ಪ್ರದೇಶದ ಗುತ್ತಿಗೆ ನವೀಕರಣಕ್ಕೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿತ್ತು. ಈ ಸಂಸ್ಥೆಗೆ ಜಾಗ ಕೊಡುವ ಅವಶ್ಯಕತೆ ಇದೆಯೇ ಎಂದು ಚರ್ಚೆ ಉಂಟಾಗಿತ್ತು. ಈ ಚಿಕಿತ್ಸೆ ನೀಡುವ ಸಂಸ್ಥೆಗೆ ಸ್ಥಳಾವಕಾಶ ನೀಡುವ ಜವಾಬ್ದಾರಿ ತೆಗೆದುಕೊಳ್ಳದ ಸಂದರ್ಭದಲ್ಲಿ ಈ ಧರ್ಮದವರು ಕುಷ್ಟರೋಗಿಗಳ ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿದ್ದರು. ಈ ಮಾನವೀಯ ಗುಣವನ್ನು ಪರಿಗಣಿಸಿ ಅಂದು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತು ಎಂದರು.

ಧರ್ಮವನ್ನು ಬದಲಿಸಿಕೊಳ್ಳಲು ಒತ್ತಾಯ ಹೇರಲಿಲ್ಲ
ನಾನು ಕೂಡ ಕ್ರೈಸ್ತ ಧರ್ಮದ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದು, ಎಲ್ಲಿಯೂ ನಮ್ಮ ಧರ್ಮವನ್ನು ಬದಲಿಸಿಕೊಳ್ಳಲು ಒತ್ತಾಯ ಹೇರಲಿಲ್ಲ. ಮರಕ್ಕೆ ಬೇರುಗಳು ಎಷ್ಟು ಮುಖ್ಯವೋ , ಮನುಷ್ಯನಿಗೆ ನಂಬಿಕೆಯೇ ಮುಖ್ಯ. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಗಳು, ತತ್ವಗಳ ಮೇಲೆ ವಿಶ್ವಾಸವಿದ್ದರೂ, ಪ್ರಕೃತಿಯೊಂದಿಗೆ ಬಾಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಮಾನವೀಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬದುಕಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿಗೆ ಯಾವುದೇ ಜಾತಿಯಿಲ್ಲ. ದೇವರು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ ಎಂದರು.

ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದ ಭರವಸೆ
ಸಮಾನತೆ ಮತ್ತು ಭ್ರಾತೃತ್ವ ನಮ್ಮ ಜೀವನದ ಭಾಗವಾಗಬೇಕು. ಕುವೆಂಪು ರವರ ನುಡಿಗಳಂತೆ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಸಾಕಾರಗೊಳಿಸಬೇಕಾಗಿದೆ. ಅಮಲೋದ್ಭವ ಮಾತೆಯ ದೇವಾಲಯ (Immaculate Conception Church) ಕಳೆದ 125 ವರ್ಷಗಳಿಂದ ಪರಿಶುದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಡಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ದೇಶಕ್ಕೆ ಆಸ್ತಿಯಾಗಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಶಾಸಕರಾದ ದಿನೇಶ್ ಗುಂಡೂರಾವ್ ಅವರಿಗೆ ಕ್ಷೇತ್ರದ ಜನರ ಬೆಂಬಲವಿದೆ. ಅವರು ಈ ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಹೆಚ್ಚಿನ ಸಹಕಾರದ ಬೇಡಿಕೆಯಿರಿಸಿದ್ದು, ಈ ಬಗ್ಗೆ ಸಧ್ಯದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೋ, ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್, ಫಾದರ್ ಅಮಲ್ ರಾಜ್ ಕ್ರಿಷ್ಟಿನ್, ಜಾಕಬ್ ಯಕ್ಕಾಲಂ, ಅರೋಗ್ಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು

Related Articles

Back to top button