
ಪ್ರಗತಿವಾಹಿನಿ ಸುದ್ದಿ: ಮೀನು ಹಿಡಿಯುವ ಸಂದರ್ಭದಲ್ಲಿ ಯುವಕನ ಗಂಟಲೊಳಗೆ ಜೀವಂತ ಮೀನೊಂದು ಸಿಲುಕಿ ಸಾವನಪ್ಪಿದ ವಿಚಿತ್ರ ಘಟನೆ ಕೇರಳದ ಆಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ನಡೆದಿದೆ.
ಮೃತ ದುರ್ದೈವಿ ಯುವಕನನ್ನು ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ. ಈತ ಭಾನುವಾರ ರಜಾದಿನವಾಗಿದ್ದರಿಂದ ಸಂಜೆ 4.30ರ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ಗದ್ದೆಗೆ ನೀರು ಹಾಯಿಸಿ ಮೀನು ಹಿಡಿಯಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಇನ್ನೊಂದು ಮೀನನ್ನು ಹಿಡಿಯಲು ಆದರ್ಶ್ ಯತ್ನಿಸುತ್ತಿದ್ದಾಗ ಮೀನೊಂದು ಆತನ ಬಾಯಿ ಕಚ್ಚಿಕೊಂಡು ಗಂಟಲೊಳಗೆ ಹೋಗಿ ಸಿಲುಕಿಕೊಂಡಿದೆ. ಕೂಡಲೇ ಯುವಕನನ್ನು ಓಚಿರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.