Kannada NewsKarnataka NewsLatestPolitics

*ಕಂದಾಯ, ಪಂಚಾಯಿತಿ ಅಧಿಕಾರಿಗಳು ಲಂಚ ಕೇಳಿದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ*

ಪ್ರಗತಿವಾಹಿನಿ ಸುದ್ದಿ; ಕನಕಪುರ: “ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲಾ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹಾಕಲಿದ್ದೇವೆ” ಎಂದು ತಿಳಿಸಿದರು.

ಕನಕಪುರದಲ್ಲಿ ನಡೆದ ಜನಸಂಪರ್ಕ ಸಭೆಗೂ ಮುಂಚಿತವಾಗಿ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, “ಕಂದಾಯ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಬಹುದು. ಜನರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನಮ್ಮ ತಾಲ್ಲೂಕಿನಲ್ಲಿ ಉತ್ತಮವಾದ ಆಡಳಿತ ನಡೆಯಬೇಕು. ಈ ಹಿಂದಿನ ತಹಶೀಲ್ದಾರ್ ಇದ್ದಾಗ ಒಂದಷ್ಟು ತೊಂದರೆಗಳು ಇದ್ದವು

ಕನಕಪುರ- ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಈ ಕಾರ್ಯವನ್ನು ಉಯ್ಯಂಬಳ್ಳಿಯಿಂದ ಪ್ರಾರಂಭ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪೋಡಿ- ಪಹಣಿ ದಾಖಲೆಗಳು ನಿಮ್ಮದೇ ಮೊಬೈಲ್ನಲ್ಲಿ ದೊರೆಯುತ್ತದೆ ಎಂದರು.

ಈಗಾಗಲೇ ಭೂಮಿ ಯೋಜನೆಯ ಅಡಿ ಪಹಣಿ- ಪೋಡಿ ದಾಖಲೆಗಳು ಸಿಗುತ್ತಿವೆ. ದಿಶಾ ವೆಬ್ಸೈಟಿನಲ್ಲಿ ನಿಮ್ಮ ಜಮೀನಿನ ವಾಸ್ತವ ಸ್ಥಿತಿ ತಿಳಿಯುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜೀಟಲೀಕರಣ ಮತ್ತು ಮರು ಸರ್ವೇ ಕೆಲಸ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ನನ್ನ ಕ್ಷೇತ್ರದಲ್ಲೂ ಜನರಿಗೆ ಈ ಸೌಲಭ್ಯ ದೊರೆಯಲಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು, ತೊಂದರೆಗಳನ್ನು ಶೀಘ್ರ ಬಗೆಹರಿಸಿಬೇಕು ಎಂದು ಸೂಚನೆ ನೀಡಿದ್ದೇನೆ.

ಜನಸ್ಪಂದನ ಸಭೆಯಲ್ಲಿ ಅರ್ಜಿಗಳನ್ನು ನೀಡಿ ಸ್ವೀಕೃತಿ ದಾಖಲೆಗಳನ್ನು ಜನರು ಪಡೆಯಬೇಕು. ಇಲ್ಲಿ ಸಲ್ಲಿಸಿದ ಅಹವಾಲುಗಳನ್ನು ಪರಿಶೀಲನೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಲಾಗುವುದು. ನಾನು ಸಹ ಕಾಲ, ಕಾಲಕ್ಕೆ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತೇನೆ.

ಕನಕಪುರ ತಾಲ್ಲೂಕಿನಲ್ಲಿ 1,16,290 ಮನೆಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆದಿವೆ 3,200 ಮನೆಗಳಿಗೆ ಈ ಸೌಲಭ್ಯ ತಾಂತ್ರಿಕ ಕಾರಣಗಳಿಂದ ದೊರೆತಿಲ್ಲ. ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಿದ್ದು, ಗೃಹಲಕ್ಷ್ಮಿ ಯೋಜನೆಯ ಅಡಿ ಒಂದಷ್ಟು ಜನರಿಗೆ ತಾಂತ್ರಿಕ ಕಾರಣಗಳಿಂದ ಹಣ ಬಂದಿಲ್ಲ.

ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ, ಸ್ವಲ್ಪ ತಡವಾಗಬಹುದು ಆದರೆ ಆದಷ್ಟು ಬೇಗ ಜನರ ಸೇವೆಗೆ ಸಿಗಲಿದೆ. ತಾಯಿ- ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಆರೋಗ್ಯದ ವಿಚಾರದಲ್ಲಿ ಜನರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಬೇಗ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲಾಗುವುದು.

ಈ ಮೊದಲು ಗ್ರಾಮಸಭೆಗಳನ್ನು ನಡೆಸಿ ಜನರ ಕಷ್ಟಕ್ಕೆ ದನಿಯಾಗುತ್ತಿದ್ದೆ. ರಾಜ್ಯ ರಾಜಕಾರಣದಲ್ಲಿ ಹೆಚ್ಚು ತೊಡಗಿಸಿಕೊಂಡ ನಂತರ ಸಾಧ್ಯವಾಗಿರಲಿಲ್ಲ. ಆದರೂ ನನ್ನ ಮೇಲೆ ಜನರು ನಂಬಿಕೆಯಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುತ್ತಿರುವುದಕ್ಕೆ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ.

ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿಯೇ ವಾಸ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೇ ಮನೆ ಮಾಡಿಕೊಂಡು ಜನರ ನಡುವೆಯೇ ಇರಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.

ಪಕ್ಷದ ಜವಾಬ್ದಾರಿ, ಉಪಮುಖ್ಯಮಂತ್ರಿ, ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ದಿ ಇಲಾಖೆ ಸೇರಿದಂತೆ ನಾನಾ ಕೆಲಸಗಳ ಒತ್ತಡದ ನಡುವೆ ಕಳೆದ 6 ತಿಂಗಳಿನಿಂದ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಆಗಿರಲಿಲ್ಲ. ಯಾವುದೇ ಇಲಾಖೆಯ ಸಮಸ್ಯೆಗಳು ಇದ್ದರೂ ಜನಸ್ಪಂದನ ಸಭೆಯಲ್ಲಿ ಬಗೆಹರಿಸಲಾಗುವುದು.

ತಾಲ್ಲೂಕು ಆಸ್ಪತ್ರೆ, ಆಶ್ರಯ, ಆರಾಧನಾ ಸಮಿತಿಗಳಿಗೆ ಸದಸ್ಯರ ನೇಮಕಾತಿಯನ್ನು ಶೀಘ್ರ ಮಾಡಲಾಗುವುದು. ಆಸಕ್ತ ಕಾಲೇಜು ಯುವಕರನ್ನು ಕಾಲೇಜು ಸಮಿತಿಗಳಲ್ಲಿ ನೇಮಕ ಮಾಡಬೇಕು ಎಂದು ಸಂಸದರಾದ ಸುರೇಶ್ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ. ಯಾರು ಕಾನುನೂಬದ್ಧವಾಗಿ ಭೂಮಿ ಉಳುಮೆ ಮಾಡುತ್ತಿದ್ದಾರೆ ಅವರಿಗೆ ಭೂಮಿ ಹಂಚಿಕೆ ಮಾಡುವಂತೆ ಹೇಳಿದ್ದೇನೆ.

ಬರುವ ಜನವರಿ ತಿಂಗಳಿನಲ್ಲಿ ಮತ್ತೊಮ್ಮೆ ಜನತಾ ದರ್ಶನ ಮಾಡಲಿದ್ದು, ಇಂದೇ ಜಿಲ್ಲಾಧಿಕಾರಿಗಳಿಗೆ ಮುಂದಿನ ಭೇಟಿಯ ದಿನಾಂಕ ತಿಳಿಸುತ್ತೇನೆ. ನಂತರ ವಾರಕ್ಕೆ ಒಂದು ದಿನ ಕ್ಷೇತ್ರದ ಜನರಿಗೆ ಸಮಯ ಕೊಡುವಂತೆ ನೋಡಿಕೊಳ್ಳುತ್ತೇನೆ.

ನಿಮ್ಮ ಕಷ್ಟಕ್ಕೆ ಯಾರೂ ಬರುವುದಿಲ್ಲ. ಚುನಾವಣೆ ಹೊತ್ತಿನಲ್ಲಿ ಯಾವ ಅಧಿಕಾರಿಯೂ ಊರಿಗೆ ಬರಲಿಲ್ಲ. ಈ ಅಧಿಕಾರಿಗಳು ಸಾಕಷ್ಟು ಒತ್ತಡವನ್ನು ನಮಗೂ- ನಿಮಗೂ ಕೊಡುತ್ತಿರುತ್ತಾರೆ. ನೆಂಟಸ್ತನ ಹೇಳಿಕೊಂಡು ನನ್ನ ಬಳಿ ಬರುತ್ತಿರುತ್ತಾರೆ ನಿಮ್ಮಗಳ ಕೆಲಸ ಮಾಡಿಕೊಡುತ್ತೇವೆ ಎಂದು ಹೋಟೆಲ್ ರೂಮ್ಗಳನ್ನು ಮಾಡಿಸಿಕೊಂಡು, ಕೆಲಸ ಮಾಡಿಕೊಡುತ್ತೇವೆ ಎಂದು ನಮ್ಮ ಮುಂದೆ ತಂದು ನಿಲ್ಲಿಸುವ ಕೆಲಸಗಳನ್ನು ಸಾಕಷ್ಟು ಅಧಿಕಾರಿಗಳು ಮಾಡುತ್ತಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಯಾಮಾರಬಾರದು. ಯಾವುದೇ ತೊಂದರೆಗಳು ಇದ್ದರೂ ನೇರವಾಗಿ ನನ್ನನ್ನೇ ಸಂಪರ್ಕಿಸಿ.

ನಾವು ಬೆಂಗಳೂರು ಜಿಲ್ಲೆಯವರು; ಜಮೀನು ಮಾರಾಟ ಮಾಡಬೇಡಿ

ನಿಮ್ಮ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೆಲೆ ಬರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭೂಮಿಗಳನ್ನು ಮಾರಾಟ ಮಾಡಿಕೊಳ್ಳಬೇಡಿ. ಕನಕಪುರ, ಸಾತನೂರು, ಕೋಡಿಹಳ್ಳಿ, ದೊಡ್ಡ ಆಲಹಳ್ಳಿ ಇಲ್ಲೆಲ್ಲಾ ಮೊದಲು ಭೂಮಿಯ ಬೆಲೆ ಎಷ್ಟಿತ್ತು ಈಗ ಎಷ್ಟಿದೆ ಎಂದು ನೀವೆ ಅಂದಾಜು ಮಾಡಿ. ನಾನು ಏನೇನು ಮಾಡಲು ಸಾಧ್ಯ ಆ ಕೆಲಸವನ್ನು ಮಾಡಿದ್ದೇನೆ. ಇದಕ್ಕೆ ಎಷ್ಟೊಂದು ವಿವಾದ ಮಾಡಿದರು. ಇದೆಲ್ಲಾ ಬೆಂಗಳೂರು ಎಂದ ತಕ್ಷಣ ಏನೇನೋ ವ್ಯಾಖ್ಯಾನ ಪ್ರಾರಂಭವಾಯಿತು. ಇದನ್ನ ವಿರೋಧ ಮಾಡುವವರೆಲ್ಲ ಮಾಡಲಿ, ನಾವು ಬೆಂಗಳೂರು ಜಿಲ್ಲೆಯವರಯ ಸೂಕ್ತ ಕಾಲ ಬರುತ್ತದೆ. ನಾನು ನಿಮ್ಮ ಗೌರವ ಉಳಿಸಲು ಏನು ಮಾಡಬೇಕೋ ಮಾಡುತ್ತೇನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button