
ಪ್ರಗತಿವಾಹಿನಿ ಸುದ್ದಿ: “ಪ್ರಭಾಕರ್ ಕೋರೆ ಅವರನ್ನು ನಾವು ಕಾಂಗ್ರೆಸ್ ಪಕ್ಷಕ್ಕೆ ಕರೆದೂ ಇಲ್ಲ, ಅವರು ಬರುವುದೂ ಇಲ್ಲ. ಇದೊಂದು ಸೌಹರ್ದಯುತ ಭೇಟಿ ಅಷ್ಟೇ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ ಅವರ ಮನೆಗೆ ಸೋಮವಾರ ಭೇಟಿ ನೀಡಿದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಭಾಕರ್ ಕೋರೆ ಅವರು ನಮಗೆ ಶಾಶ್ವತ ಗೆಳೆಯರು. ಯಾವುದೇ ಸರ್ಕಾರವಿದ್ದರೂ ಅವರ ಸಂಸ್ಥೆಗಳಿಂದ ಸಹಕಾರ ನೀಡುತ್ತಾರೆ. ಗಾಂಧಿ ಭಾರತ ಕಾರ್ಯಕ್ರಮವಿರುವ ಕಾರಣ ಗಣ್ಯರು ಉಳಿದುಕೊಳ್ಳಲು ಅವರ ಶಿಕ್ಷಣ ಸಂಸ್ಥೆಗಳಿಂದ 170 ಕ್ಕೂ ಹೆಚ್ಚು ಕೊಠಡಿಗಳನ್ನು ನೀಡಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಂಸ್ಥೆಯಿಂದ ಬೇಕಾದ ಸಹಾಯ ಮಾಡುತ್ತಿದ್ದಾರೆ” ಎಂದು ಹೇಳಿದರು.
“ಈ ಕಾರಣಕ್ಕೆ ಅವರ ಮನೆಗೆ ಬಂದು ಸೌಹಾರ್ದಯುತ ಭೇಟಿ ನೀಡಿ, ಊಟ ಮಾಡಿದೆ. ಒಳ್ಳೆಯ ಜೋಳದ ರೊಟ್ಟಿ ಊಟ ನೀಡಿದ್ದಾರೆ. ಜೋಳವನ್ನು ತಿನ್ನುವವನು ಜಟ್ಟಿಯಂತೆ ಆಗುವನು ಎನ್ನುವ ಮಾತಿದೆ” ಎಂದರು.

“ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೋರೆ ಅವರ ಕುಟುಂಬ ದೊಡ್ಡ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಚಳುವಳಿಗೆ ಧನ ಸಹಾಯ ಮಾಡಿದೆ. ಪ್ರಭಾಕರ್ ಕೋರೆ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರು” ಎಂದರು.
ಕೋರೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾನಗಳು ಸಿಗಲಿಲ್ಲ ಅಲ್ಲವೇ ಎನ್ನುವ ಪ್ರಶ್ನೆಗೆ, “ಈ ಪ್ರಶ್ನೆಯನ್ನು ಬಿಜೆಪಿಯವರ ಬಳಿ ಕೇಳಿ” ಎಂದರು.
ಯತ್ನಾಳ್ ನ ಹುಚ್ಚಾಸ್ಪತ್ರೆಗೆ ಸೇರಿಸೋಣ
ಮಹಾತ್ಮ ಗಾಂಧಿ ಅವರ ಹತ್ಯೆಯಲ್ಲಿ ನೆಹರೂ ಅವರ ಕೈವಾಡವಿತ್ತು ಎನ್ನುವ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಎಂ.ಬಿ.ಪಾಟೀಲ್ ಅವರ ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಅವರಿಗೆ ಹೇಳುವೆ ಅಥವಾ ಹುಚ್ಚಾಸ್ಪತ್ರೆಗೆ ಸೇರಿಸಲು ಏರ್ಪಾಟು ಮಾಡೋಣ” ಎಂದು ಹೇಳಿದರು.
“ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರು 21 ರ ಬೆಳಿಗ್ಗೆ 10.30 ಕ್ಕೆ ಆಗಮಿಸಬಹುದು. ನೇರ ಸುವರ್ಣಸೌಧಕ್ಕೆ ಆಗಮಿಸುತ್ತಾರೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ