Belagavi NewsBelgaum News

*ಆಸ್ತಿ ಕಲಹ, ಮಾಟಮಂತ್ರದ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ಉದ್ಯಮಿ ಶಿವಕಾಂತ ಸಿದ್ನಾಳ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಉದ್ಯಮಿ, ರಾಜಕಾರಣಿ ಕುಟುಂಬದ ಆಸ್ತಿ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದ ಉದ್ಯಮಿ ಶಿವಕಾಂತ್ ಸಿದ್ನಾಳ್ ಅವರ ಪತ್ನಿ ದೀಪಾ ಸಿದ್ನಾಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

ವಿಜಯಕಾಂತ ಹಾಲಿನ ಡೇರಿ (ಆದಿತ್ಯ ಮಿಲ್ಕ್) ಕಬಳಿಸಲು ಮಾಟಮಂತ್ರ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ದೀಪಾ ಸಿದ್ನಾಳ ಬೆಳಗಾವಿ ಕ್ಯಾಂಪ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೀಪಾ ಸಿದ್ನಾಳ ದಿ.ಶಿವಕಾಂತ್ ಸಿದ್ನಾಳ ಪತ್ನಿ. ಮಾಜಿ ಸಂಸದ ಎಸ್.ಬಿ.ಸಿದ್ನಾಳ ಕಿರಿಯ ಸೊಸೆ, ಡಾ.ವಿಜಯ ಸಂಕೇಶ್ವರ ಅವರ ಪುತ್ರಿಯಾಗಿದ್ದಾರೆ.

ಕರ್ನಾಟಕದ ಆದಿತ್ಯ ಮಿಲ್ಕ್ ಸಂಸ್ಥಾಪಕರಾಗಿದ್ದ ಉದ್ಯಮಿ ಶಿವಕಾಂತ್ ಸಿದ್ನಾಳ 2002ರಲ್ಲಿ ಉದ್ಯಮಿ ವಿಜಯ್ ಸಂಕೇಶ್ವರ್ ಪುತ್ರಿ ದೀಪಾ ಅವರನ್ನು ವಿವಾಹವಾಗಿದ್ದರು. 2006ರಲ್ಲಿ ಬೈಲಹೊಂಗಲ ತಾಲೂಕಿನ ನೇಗಿನಾಳ ಬಳಿ ಶಿವಕಾಂತ್ ಸಿದ್ನಾಳ, ವಿಜಯಸಂಕೇಶ್ವರ ಪಾಲುದಾರಿಕೆಯಲ್ಲಿ ವಿಜಯಕಾಂತ ಹಾಲಿನ ಡೇರಿ ಸ್ಥಾಪಿಸಿದ್ದರು. ವಿಜಯಕಾಂತ ಡೇರಿಗೆ ಡಾ.ವಿಜಯ ಸಂಕೇಶ್ವರ ಚೇರ್ ಮನ್ ಆಗಿದ್ದಾರೆ. ಎರಡು ತಿಂಗಳ ಹಿಂದೆ ಶಿವಕಾಂತ ಸಿದ್ನಾಳ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು.

ವಿಜಯಕಾಂತ ಹಾಲಿನ ಡೇರಿ ಹಾಗೂ ಆಸ್ತಿಗಾಗಿ ಶಿವಕಾಂತ ಸಿದ್ನಾಳ ಸಹೋದರ ಹಾಗೂ ಕುಟುಂಬದವರು ಮಾಟಮಂತ್ರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ಶಿವಕಾಂತ ಸಿದ್ನಾಳ್ ಪತ್ನಿ ದೀಪಾ ಕೇಸ್ ದಾಖಲಿಸಿದ್ದಾರೆ.

ಮೃತ ಶಿವಕಾಂತ್ ಸಹೋದರ ಶಶಿಕಾಂತ್ ಸಿದ್ನಾಳ, ಅವರ ಪತ್ನಿ ವಾಣಿ ಸಿದ್ನಾಳ, ಅವರ ಮಗ ದಿಗ್ವಿಜಯ್ ಸಿದ್ನಾಳ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 506, 307ರಡಿ ಪ್ರಕರಣ ದಾಖಲಾಗಿದೆ. ವಿಜಯಕಾಂತ್ ಹಾಲಿನ ಡೆರಿ ಕಬಳಿಸಲು ಮಾಟ ಮಂತ್ರದ ಹುನ್ನಾರ ನಡೆದಿದೆ. ಶಿವಕಾಂತ್ ಸಮಾಧಿಯ ಸುತ್ತಲೂ ಮಾಟಮಂತ್ರ ಮಾಡಿಸಿದ್ದಾರೆ. ಶಿವಾಕಾಂತ್ ಸಾವಿಗೆ ಬ್ಲ್ಯಾಕ್ ಮ್ಯಾಜಿಕ್ ಕಾರಣವಾಯಿತೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೀಪಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿ ಕ್ಯಾಂಪ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಬೆಳಗಾವಿ ಕಮಿಷ್ನರ್ ಇಡಾ ಮಾರ್ಟಿನ್, ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ತನಿಖೆ ಚುರುಕುಗೊಂಡಿದೆ ಎಂದು ತಿಳಿಸಿದ್ದಾರೆ.

Related Articles

Back to top button