*BREAKING: ಕಣ್ಣು ನೋವೆಂದು ಒಂದು ದಿನ ರಜೆ ಹಾಕಿದ್ದಕ್ಕೆ ಪ್ರಾಧ್ಯಾಪಕರಿಂದ ವ್ಯಂಗ್ಯ-ಅವಮಾನ: ಮನನೊಂದ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೋರ್ವಳು ಆಡಳಿತ ಮಂಡಳಿಯ, ಪ್ರಾಧ್ಯಾಪಕರ ಅವಮಾನ, ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೊವಲಯದ ಬೊಮ್ಮನಹಳ್ಳಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ 23 ವರ್ಷದ ಯಶಸ್ವಿನಿ ಆತ್ಮಹತ್ಯೆಗೆ ಶರಣಾದವಳು. ಕಣ್ಣು ನೋವಿನ ಕಾರಣಕ್ಕೆ ಯಶಸ್ವಿನಿ ಬುಧವಾರ ಕಾಲೇಜಿಗೆ ರಜೆ ಹಾಕಿದ್ದಳು. ಈ ಬಗ್ಗೆ ತಾಯಿಗೂ ತಿಳಿಸಿದ್ದಳು. ಗುರುವಾರ ಕಾಲೇಜಿಗೆ ಹೋದಾಗ ಆಕೆಯನ್ನು ಪ್ರಾಧ್ಯಾಪಕರು, ಪ್ರಾಂಶುಪಾಲರು ತೀವ್ರವಾಗಿ ಅವಮಾನಿಸಿದ್ದರು. ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಡ್ರಾಪ್ಸ್ ಹಾಕಿದೆ? ಪೂರ್ತಿ ಬಾಟಲ್ ಹಾಕಿಕೊಂಡ್ಯಾ? ಎಂದು ವ್ಯಂಗ್ಯವಾಡಿದ್ದಾರೆ. ಪ್ರಾಧ್ಯಾಪಕರ ಮಾತಿನಿಂದ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಿದ್ಯಾರ್ಥಿನಿಯ ಸ್ನೇಹಿತರು ಶವಾಗಾರದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಯಶಸ್ವಿನಿ ಸಾವಿಗೆ ನ್ಯಾಯಕೊಡಿಸಿ, ಪ್ರಾಧ್ಯಾಪಕರು, ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಪರಿಮಳ ಹಾಗೂ ಭೋದೇವಯ್ಯ ದಂಪತಿಯ ಒಬ್ಬಳೇ ಮಗಳು ಯಶಸ್ವಿನಿ. ಡೆಂಟಲ್ ಮೂರನೇ ವರ್ಷದಲ್ಲಿ ಓದುತ್ತಿದ್ದಳು. ಇತ್ತೀಚೆಗೆ ನಡೆದ ಸೆಮಿಸ್ಟರ್ ನಲ್ಲಿ ಕೂಡ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರು ಮಾತನಾಡಲು ಅವಕಾಶ ನೀಡಿರಿಲಲ್ಲಿ. ರೆಡಿಯಾಲಜಿ ಕೇಸ್ ಕೂಡ ಕೊಡುತ್ತುರಲಿಲ್ಲ. ಆಕೆಗೆ ತುಂಬಾ ಅವಮಾನ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಒಬ್ಬಳೇ ಒಬ್ಬ ಮಗಳನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಾಂಶುಪಾಲರು, ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.




