*ಗಾಂಜಾ ಸೇವನೆ ಮಾಡದಿದ್ದರೂ ಕೇಸ್ ಹಾಕಿ ಪೊಲೀಸರಿಂದ ಕಿರುಕುಳ: ಮನನೊಂದ ಬಿಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಗಾಂಜಾ ಸೇವನೆ ಮಾಡದಿದ್ದರೂ ವಿದ್ಯಾರ್ಥಿಯೊಬ್ಬನನ್ನು ಗಾಂಜಾ ಕೇಸ್ ನಲ್ಲಿ ವಶಕ್ಕೆ ಪಡೆದು ಎರಡು ದಿನ ವಿಚಾರಣೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬಿಎಸ್ ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಧಾರವಾಡದಲ್ಲಿ ಈ ಘಟನೆ ನಡೆದಿದೆ. ಕಿಟಲ್ ಕಾಲೇಜ್ ಬಿಎಸ್ ಸಿ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆಗೆ ಶರಣಾದವನು. ಗಾಂಜಾ ಸೇವನೆ ಆರೋಪದಲ್ಲಿ ಪೊಲೀಸರು 10 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ತಪಾಸಣೆ ನಡೆಸಿದಾಗ ಆದಿತ್ಯ ವರದಿಯಲ್ಲಿ ನೆಗೆಟ್ ಬಂದಿತ್ತು. ವಿಚಾರಣೆ ಬಳಿಕ ಆದಿತ್ಯನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ ಕೇಸ್ ದಾಖಲಿಸಬಾರದೆಂದರೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಗಾಂಜಾ ಸೇವಿಸದಿದ್ದರೂ ಸುಳ್ಳು ಆರೋಪ ಮಾಡಿ ಪೊಲೀಸರು ವಶಕ್ಕೆ ಪಡೆದಿದ್ದಲ್ಲದೇ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿರುವುದಕ್ಕೆ ಮನನೊಂದ ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡಿರುವ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.



