
ಪ್ರಗತಿವಾಹಿನಿ ಸುದ್ದಿ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಶಿಕ್ಷಕರೊಬ್ಬರಿಗೆ ಸೈಬರ್ ವಂಚಕರು ಕರೆ ಮಾಡಿ ಬ್ಯಾಂಕ್ ಖಾತೆಯಿಂದ 22.41 ಲಕ್ಷರೂಪಾಯಿ ದೋಚಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಈ ಸೈಬರ್ ವಂಚನೆ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊರಟಗೆರೆ ಮೂಲದ ಅರುಣ್ ಕುಮಾರ್ ಬಂಧಿತ ಆರೋಪಿ. ಅರುಣ್ ಕುಮಾರ್ ಹಾಗೂ ಗ್ಯಾಂಗ್ ಮಾರ್ಚ್ 12ರಂದು ದಾವಣಗೆರೆ ಮೂಲದ ಶಿಕ್ಷಕರೊಬ್ಬರಿಗೆ ಕರೆ ಮಾಡಿ, ಬ್ಲೂ ಡಾರ್ಟ್ ಕೊರಿಯರ್ ಹೆಸರಲ್ಲಿ ಪಾರ್ಸಲ್ ಬಂದಿದೆ. ಮುಂಬೈನಿಂದ ದುಬೈಗೆ ಕಳುಹಿಸುತ್ತಿದ್ದ ಪಾರ್ಸಲ್ ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಪಾರ್ಸಲ್ ನಲ್ಲಿ ಡ್ರಗ್ಸ್ ಸಿಕ್ಕಿದ್ದರಿಂದ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುವುದು ಎಂದು ವಂಚಕರು ಬೆದರಿಕೆ ಹಾಕಿದ್ದಾರೆ.
ಶಿಕ್ಷಕನ ಬ್ಯಾಂಕ್ ಖಾತೆಯ ವಿವರ ಪಡೆದು ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ 19 ಲಕ್ಷ ರೂಪಾಯಿ ಫ್ರೀಜ್ ಮಾಡಿದ್ದಾರೆ. ವಂಚನೆಗೊಳಗಾದ ಶಿಕ್ಷಕ ದಾವಣಗೆರೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.