Kannada NewsKarnataka NewsLatestPolitics

*ಬರ ಪರಿಶೀಲನೆ ನಡೆಸಿದ ಸಿಎಂ*

ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ? ಕೃಷಿ ಕಾರ್ಮಿಕರೊಂದಿಗೆ ಸಿಎಂ ಮಾತುಕತೆ

Home add -Advt

ಪ್ರಗತಿವಾಹಿನಿ ಸುದ್ದಿ: “ಪರಿಶೀಲನೆ ನಡೆಸಿ ಕೇಂದ್ರದ ಮಾರ್ಗಸೂಚಿ ಅನುಸಾರ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ರೈತರಿಗೆ ಭರವಸೆ ನೀಡಿದರು.

ಸಿಎಂ ಡಿ ಕೆ ಶಿವಕುಮಾರ್ ಅವರು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕದಾಂಪೂರ, ಹುಲಕೋಟಿ, ಕುರ್ತಕೋಟಿ ಗ್ರಾಮಗಳಲ್ಲಿ ರೈತರ ಜಮೀನಿಗೆ ಮಂಗಳವಾರ ಭೇಟಿ ನೀಡಿ ಸ್ಥಳೀಯ ರೈತರೊಂದಿಗೆ ಚರ್ಚೆ ನಡೆಸಿದರು.

ಈ ಬಾರಿ ಬರ ಪರಿಸ್ಥಿತಿಯಿಂದ ಬೆಳೆಗಳು ಹಾಳಾಗಿವೆ. ಗದಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರದಿಂದ ತತ್ತರಿಸಿವೆ. ಹೀಗಾಗಿ ಬಾಕಿ ಇರುವ ಜಿಲ್ಲೆಯ ಆರು ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ರೈತರು ಮನವಿ ಮಾಡಿದರು.

ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, “ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಮತ್ತಷ್ಟು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ಪರಿಸ್ಥಿತಿ ಅಧ್ಯಯನ ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಬರ ಪೀಡಿತ ತಾಲ್ಲೂಕು ಘೋಷಣೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಕುರ್ತಕೋಟಿಯಲ್ಲಿ ರೈತ ಜಿ ಎನ್ ಪಾಟೀಲ ಅವರ ಜಮೀನಿಗೆ ಭೇಟಿ ನೀಡಿ ಅವರ ಜಮೀನಿನ ಬದುಗಳಲ್ಲಿ ನೆಡಲಾಗಿರುವ ತೇಗದ ಮರಗಳನ್ನು ಪರಿಶೀಲಿಸಿ, ಸರ್ಕಾರ ಕೈಗೊಂಡಿರುವ ‘ತೇಗದ ಸಿರಿ’ ಯೋಜನೆ ಬಗ್ಗೆ ಚರ್ಚೆ ನಡೆಸಿದರು.

ಬಳಿಕ ಅಲ್ಲಿಗೆ ಬಂದಿದ್ದ ಕೃಷಿ ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಕೂಲಿ ಕಾರ್ಮಿಕರು ನರೇಗಾ ಯೋಜನೆ ಇದ್ದಾಗ ಯೋಜನೆ ಅಡಿಯಲ್ಲಿ ನಾವು ಹೆಚ್ಚು ಕೆಲಸ ಪಡೆಯುತ್ತಿದ್ದೆವು. ಈಗ ವಿಬಿ ಗ್ರಾಮ್ ಜಿ ಯೋಜನೆ ಅಡಿಯಲ್ಲಿ ಹೆಚ್ಚು ಕೆಲಸ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ!- ಕೃಷಿ ಕಾರ್ಮಿಕರೊಂದಿಗೆ ಸಿಎಂ ಮಾತುಕತೆ
ಗ್ಯಾರಂಟಿ ಯೋಜನೆಗಳು ಸರಿಯಾಗಿ ತಲುಪುತ್ತಿವೆಯೇ? ಎಂದು ವಿಚಾರಿಸಿದರು. ಗೃಹಜ್ಯೋತಿ ಯೋಜನೆ ಮರುಪರಿಶೀಲನೆ ಮಾಡಲಾಗಿದೆಯೇ? ಎಂದು ವಿಚಾರಿಸಿದರು. ಜೊತೆಗೆ ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ ಮಾಡಲಾಗುತ್ತಿದ್ದೂ, ನೀವು ನಿಮ್ಮ ದೂರವಾಣಿ ಸಂಖ್ಯೆಯನ್ನೇ ನೀಡಬೇಕು. ಮೂರನೇ ವ್ಯಕ್ತಿ ದೂರವಾಣಿ ಸಂಖ್ಯೆ ನೀಡಿದರೆ ಆಗುವುದಿಲ್ಲ ಎಂದು ಹೇಳಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳು ತಮ್ಮ ಬದುಕಿಗೆ ಹೇಗೆ ನೆರವಾಗಿದೆ ಎಂದು ಕೂಲಿ ಕಾರ್ಮಿಕರು ವಿವರಿಸಿದರು. ಕೂಲಿ ಕಾರ್ಮಿಕರು ಗ್ಯಾರಂಟಿ ಯೋಜನೆಗಳು ನೆರವಾಗಿದ್ದು, ಪ್ರತಿ ತಿಂಗಳು 10 ಕೆ ಜಿ ಅಕ್ಕಿ ಬರುತ್ತಿದೆ, ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿದೆ, ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್ ಸಿಗುತ್ತಿದ್ದೂ ಈ ಯೋಜನೆಗಳಿಂದ ನಮಗೆ ಕೂಲಿ ಸಿಗದಿದ್ದಾಗಲೂ ನೆಮ್ಮದಿ ಜೀವನ ನಡೆಸಬಹುದು ಎಂದು ತಿಳಿಸಿದರು.

Related Articles

Back to top button