
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಕೆಲವೆಡೆ ಗುರುವಾರ ರಾತ್ರಿ ಭೂಕಂಪನ ಉಂಟಾಗಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿದ್ದಾರೆ.
ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಅನೇಕ ಕಡೆ ರಾತ್ರಿ 10.22ರ ಹೊತ್ತಿಗೆ ಭೂಮಿ ನಡುಗಿದೆ. 4 -5 ಸೆಕೆಂಡ್ ಕಾಲ ಭೂಮಿ ಕಂಪಿಸಿದೆ ಎಂದು ಜನರು ಹೇಳುತ್ತಿದ್ದಾರೆ.
ಶಿವಮೊಗ್ಗದಲ್ಲಿ ಭಾರಿ ಶಬ್ದ ಕೇಳಿಸಿದ್ದು, ಯಾವುದೋ ಸ್ಫೋಟ ಸಂಭವಿಸಿರಬಹುದು ಎಂದು ಜನ ಭಾವಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಭಾಗದಲ್ಲಿ ಭೂಕಂಪ ವಾದ ಅನುಭವವಾಗಿದೆ. ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ ಭಾಗದ ಹಲವು ಭಾಗದಲ್ಲಿ ಇಂದು 10:20 ರ ರಾತ್ರಿ ವೇಳೆ ಬಾಂಬ್ ಸಿಡಿದಂತೆ ಸದ್ದು ಕೇಳಿದ್ದು ಜನ ಬೆಚ್ಚಿ ಬಿದ್ದಿದ್ದಾರೆ.
ಹಲವು ಭಾಗದಲ್ಲಿ ಭೂಮಿ ಕಂಪಿಸದಿದ್ದರೂ ಬಾಂಬ್ ಸಿಡಿದಂತೆ ಸದ್ದು ಕೇಳಿದೆ. ಬಲ್ಲ ಮೂಲಗಳ ಪ್ರಕಾರ ಭೂಕಂಪನ ಎಂಬುದು ದೃಡಪಟ್ಟಿದ್ದು ಅಧಿಕೃತವಾಗಿ ಎಷ್ಟು ಪ್ರಮಾಣದಲ್ಲಿ ಭೂಕಂಪನವಾಗಿದೆ ಎಂದು ತಿಳಿದುಬರಬೇಕಿದೆ.
ಕಂಪನಕ್ಕಿಂತ ಶಬ್ದ ಹೆಚ್ಚು ಕೇಳಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಕೊಪ್ಪ ಭಾಗದಲ್ಲಿ ಸಹ ಈ ಶಬ್ದ ಕೇಳಿ ಬಂದಿದ್ದು ಅಧಿಕೃತವಾಗಿ ಮಾಹಿತಿ ಹೊರಬರಬೇಕಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಭೂ ಕಂಪನದ ಅನುಭವ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಂಡ್ಲಿ ಗ್ರಾಮ ಸೇರಿದಂತೆ ಹಲವು ಕಡೆ ಭೂಮಿ ಕಂಪಿಸಿದ್ದು ದೊಡ್ಡ ಶಬ್ದ ಬರುವ ಮೂಲಕ ಜನರನ್ನು ಬೆಚ್ಚಿ ಬೀಳಿಸಿದೆ. ಸಿದ್ದಾಪುರ , ತಾಳಗುಪ್ಪ, ಹೊನ್ನಾವರ ಗೇರುಸೊಪ್ಪ ಭಾಗದಲ್ಲಿ ಕಂಪನ ಆಗಿದ್ದು ದೊಡ್ಡ ಸದ್ದು ಕೇಳಿಬಂದಿದೆ.