Kannada NewsKarnataka News
ಗಡಿ ಹೋರಾಟದಲ್ಲಿ ಮಠಾಧೀಶರೇ ಮುಂದೆ – ನಾರಾಯಣಗೌಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರನ್ನು ಇಂದು ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಗೌಡ, ಕರ್ನಾಟಕದ ಗಡಿ ವಿಚಾರವಾಗಿ ಹೋರಾಟಗಾರರಿಗಿಂತಲೂ ಮಠಾಧೀಶರು ಮುಂಚೂಣಿಯಲ್ಲಿ ನಿಂತು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಹುಕ್ಕೇರಿ ಹಿರೇಮಠ ಕನ್ನಡದ ಮಠವಾಗಿ ನಿರಂತರ ಶ್ರಮಿಸುತ್ತಿದೆ ಎಂದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಾಮರಸ್ಯದಿಂದ ಬದುಕುತ್ತಿರುವ ಬೆಳಗಾವಿಯ ಜನರ ನೆಮ್ಮದಿ ಕೆಡಿಸುತ್ತಿರುವುದು ಒಳ್ಳೆಯದಲ್ಲ. ಬೆಳಗಾವಿ ವಿಚಾರಕ್ಕೆ ಯಾರೇ ಬಂದರೂ ನಾವು ಹೋರಾಟಕ್ಕೆ ಸದಾ ಇರುತ್ತೇವೆ ಎಂದರು.
ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕರ್ನಾಟಕದ ವಿಚಾರವಾಗಿ ನಾವೆಲ್ಲರೂ ಕೂಡ ಚಿಂತನೆ ಮಾಡುವ ಅವಶ್ಯಕತೆ ತುಂಬಾ ಇದೆ. ಗಡಿಭಾಗ ಬೆಳಗಾವಿಯಲ್ಲಿ ಇವತ್ತು ಜನ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶೇಷ ಕಾಳಜಿಯನ್ನ ಇರಿಸಿ, ಗಡಿಭಾಗದ ಅಭಿವೃದ್ಧಿಗಾಗಿ ಒಬ್ಬ ಸಚಿವನನ್ನು ನೆಮಿಸುವ ಮುಖಾಂತರ ಗಡಿಭಾಗದ ಜನ ನೆಮ್ಮದಿಯಿಂದ ಇರಲು ಸಹಕರಿಸುವ ಅವಶ್ಯಕತೆ ಇದೆ. ಬೆಳಗಾವಿಯ ವಿಚಾರವಾಗಿ ಏನೇ ಬಂದರೂ ನಮ್ಮ ಜನ ಬೆಳಗಾವಿಯನ್ನು ಒಂದು ಇಂಚೂ ಬಿಡಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




