
ಪ್ರಗತಿವಾಹಿನಿ ಸುದ್ದಿ: ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳನ್ನು ಕೊಲೆಗೈದು ಆಕೆಯ ಮುಖದ ಮೇಲೆ ಆ್ಯಸಿಡ್ ಸುರಿದು ಗುರುತನ್ನು ನಾಶಮಾಡಲು ಯತ್ನಿಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಖನೌನದಲ್ಲಿ ಈ ಘಟನೆ ನಡೆದಿದೆ. ಕೊಲೆ ಬಳಿಕ ಶವವನ್ನು ಬಾರಾಬಂಕಿಯ ಶಾರದಾ ಕಾಲುವೆಯಲ್ಲಿ ಎಸೆದಿದ್ದಾನೆ. ಈ ಘಟನೆ ಚಿನ್ಹಾಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಗಳ್ನನು ಕೊಲೆಗೈದು ಮುಖಕ್ಕೆ ಆಸಿಡ್ ಹಾಕಿ ಶವವನ್ನು ಕಾಲುವೆಗೆ ಎಸೆದ ಬಳಿಕ ಆತನೇ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದಾನೆ. ಪೊಲೀಸರ ತನಿಖೆ ವೇಳೆ ಅಪ್ಪನೇ ಮಗಳ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಆರೋಪಿ ತಂದೆ ವಿಜಯ್ ಕುಮಾರ್ ಚೌಬೆ 16 ವರ್ಷದ ತನ್ನ ಮಗಳ ಪ್ರೇಮ ಪ್ರಕರಣದಿಂದ ಬೇಸತ್ತಿದ್ದ. ಹೀಗಾಗಿ, ಆಕೆಯಿಂದ ತನ್ನ ಮರ್ಯಾದೆಗೆ ಕುತ್ತು ಬರುತ್ತದೆ ಎಂದು ತನ್ನ ಸ್ನೇಹಿತ ಅಬ್ದುಲ್ ಮನ್ನನ್ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಭೂತೋಚ್ಚಾಟನೆ ಮಾಡುವ ನೆಪದಲ್ಲಿ ಆಕೆಯನ್ನು ತನ್ನ ಕಾರಿನಲ್ಲಿ ಕರೆದೊಯ್ದು, ದಾರಿಯಲ್ಲಿ ಟವಲ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೊಲೆಯ ನಂತರ, ಆ ಬಾಲಕಿಯ ಗುರುತು ಮರೆಮಾಡಲು ಆಕೆಯ ಮುಖಕ್ಕೆ ಆಸಿಡ್ ಹಚ್ಚಿ ಸುಟ್ಟು ಹಾಕಿದ್ದ. ನಂತರ ಆ ಶವವನ್ನು ಬಾರಾಬಂಕಿಯ ಬದ್ದುಪುರ ಪ್ರದೇಶದ ಶಾರದಾ ಕಾಲುವೆಯ ದಡದಲ್ಲಿ ಎಸೆಯಲಾಗಿತ್ತು. ಕೊಲೆಯ ನಂತರ, ಪೊಲೀಸರ ದಾರಿ ತಪ್ಪಿಸಲು ತಾನೇ ಐಜಿಆರ್ಎಸ್ ಪೋರ್ಟಲ್ನಲ್ಲಿ ನಾಪತ್ತೆ ದೂರು ದಾಖಲಿಸಿ, ತನ್ನ ಮಗಳ ಗೆಳೆಯನೇ ಆಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದ. ಪೊಲೀಸರು ಅನುಮಾನಗೊಂಡು ತನಿಖೆ ಆರಂಭಿಸಿದರು. ತನಿಖೆಯ ಸಮಯದಲ್ಲಿ ಆತ ಪದೇಪದೆ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಾ ಇದ್ದುದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆತನೇ ಮಗಳ ಕೊಲೆ ಮಾಡಿದ್ದು ಬಯಲಾಗಿತ್ತು.
ಚಿನ್ಹಾಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ತಂದೆ ವಿಜಯ್ ಕುಮಾರ್ ಚೌಬೆ ಮತ್ತು ಆತನ ಸಹಚರ ಅಬ್ದುಲ್ ಮನ್ನನ್ ಅವರನ್ನು ಬಂಧಿಸಿದ್ದಾರೆ.
